ಬೆಂಗಳೂರು: ವಾರಸುದಾರರಿಲ್ಲದ ಅನಾಥ ಶವಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವ ಮತ್ತು ಅವುಗಳ ಅಂಗಾಗಳನ್ನು ಕಳ್ಳತನ ಮಾಡುತ್ತಿರುವ ಮೆಡಿಕಲ್ ಕಾಲೇಜು ಮಾಫಿಯಾ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ತನಿಖಾ ತಂಡ ರಚನೆ ಮಾಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರು ಮಹಾನಗರದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ, ಕೆ. ಸಿ. ಜನರಲ್ ಆಸ್ಪತ್ರೆ, ಸಂಜಯ್ ಗಾಂ„ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಗಳು ಸೇರಿದಂತೆ ರಾಜ್ಯದ ಮಹಾ ನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವ ಬಹಳಷ್ಟು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ದಾಖಲಾಗುವ ವಾರಸುದಾರರಿಲ್ಲದ ರೋಗಿಗಳು ಹಾಗೂ ಪಾದಚಾರಿ ಮಾರ್ಗಗಳು ಮತ್ತು ಉದ್ಯಾನವನಗಳಲ್ಲಿ ಪ್ರಾಣ ತ್ಯಜಿಸಿರುವ ಅನಾಥರು ಮತ್ತು ವಾರಸುದಾರರು ಪತ್ತೆಯಾಗದ ಶವಗಳನ್ನು ಮಾರಾಟ ಮಾಡುವುದರ ಜೊತೆಗೆ ಅಂಗಾಂಗ ಕಳುವು ಮಾಡಲಾಗುತ್ತಿದೆ ಎಂದು ಅವರು ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
ಅದೇ ರೀತಿ ನಗರದ ಬಹುತೇಕ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಇಂತಹ ವಾರಸುದಾರರಿಲ್ಲದ ಮತ್ತು ಅನಾಥರ ಶವಗಳನ್ನು ಉಚಿತವಾಗಿ ಸಂಸ್ಕಾರ ಮಾಡುತ್ತಿದ್ದೇವೆಂಬ ಸೋಗಿನಲ್ಲಿರುವ ಮೇಡಿಕಲ್ ಕಾಲೇಜು ಮಾಫಿಯಾ ತಂಡದ ಸದಸ್ಯ ತಂಡಗಳು ಮೇಲೆ ತಿಳಿಸಿರುವ ಆಯಾ ಸರ್ಕಾರಿ ಆಸ್ಪತ್ರೆಗಳ ಪ್ರಮುಖರು ಮತ್ತು ರಾಜ್ಯದ ಹಲವು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಷಾಮೀಲಾಗಿ ಇಂತಹ ವಾರಸುದಾರರಿಲ್ಲದ ಮತ್ತು ಅನಾಥ ಶವಗಳನ್ನು ಮಾರಾಟ ಮಾಡುತ್ತಿರುವ ಆಘಾತಕಾರಿ ಕೃತ್ಯಗಳು ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಇಂತಹ ವಾರಸುದಾರರು ಪತ್ತೆಯಾಗದ ಮತ್ತು ಅನಾಥ ಶವಗಳ ಅಂಗಾಂಗಗಳನ್ನು ಪೋಸ್ಟ್ ಮಾರ್ಟಮ್ ಹೆಸರಿನಲ್ಲಿ ಹೊರ ತೆಗೆದು ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಮಾರಾಟ ಮಾಡುವ ದಂಧೆಯೂ ಸಹ ಅವ್ಯಾಹತವಾಗಿ ಬೆಂಗಳೂರು ಮಹಾನಗರವಲ್ಲದೇ, ರಾಜ್ಯದ ಇತರೆ ನಗರಗಳಲ್ಲಿಯೂ ಸಹ ಯಾವ ಎಗ್ಗಿಲ್ಲದೇ ನಡೆದು ಬರುತ್ತಿದೆ.ಹಗಲು ಹೊತ್ತಿಗಿಂತಲೂ ರಾತ್ರಿ ಹೊತ್ತಿನಲ್ಲಿ ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಹೆಚ್ಚಾಗಿ ಎಸಗಲಾಗುತ್ತಿದೆ. ಅತ್ಯಂತ ಅಪಾಯಕಾರಿ ಮಾಫಿಯಾಗಳಲ್ಲಿ ಪ್ರಮುಖವಾಗಿರುವ ಮೇಡಿಕಲ್ ಕಾಲೇಜು ಮಾಫಿಯಾ ಮತ್ತು ಖಾಸಗಿ ಆಸ್ಪತ್ರೆಗಳ ಮಾಫಿಯಾ ತಂಡದ ಸದಸ್ಯರುಗಳು, ಕೆಲವೊಂದು ಸಮಾಜ ಘಾತುಕ ವ್ಯಕ್ತಿಗಳು ಮತ್ತು ಕೆಲವೊಂದು ಎನ್ಜಿಒಗಳು ಇಂತಹ ಕಾನೂನು ಬಾಹಿರವಾದ ಆಘಾತಕಾರಿ ಕಾರ್ಯಗಳಲ್ಲಿ ತೊಡಗಿದ್ದು, ತಾವು ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಿದ್ದಲ್ಲಿ – ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ, ಪಾದಚಾರಿ ಮಾರ್ಗಗಳು ಮತ್ತು ಉದ್ಯಾನವನಗಳಲ್ಲಿ ಅಸುನೀಗಿದ ವಾರಸುದಾರರು ಪತ್ತೆಯಾಗದ ಮತ್ತು ಅನಾಥರ ಶವಗಳನ್ನು ಸಂಸ್ಕಾರ ಮಾಡಿರುವ ಸ್ಥಳಗಳಿಂದ ಹೊರತೆಗೆದು ಪ್ರಾಮಾಣಿಕ ಹಿರಿಯ ಅಥವಾ ಫೋರೆನ್ಸಿಕ್ ತಜ್ಞರಿಂದ ಪರೀಕ್ಷೆ ಮಾಡಿಸಿದ್ದೇ ಆದಲ್ಲಿ, ಮೇಡಿಕಲ್ ಕಾಲೇಜು ಮಾಫಿಯಾ ಮತ್ತು ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮಾಫೀಯಾದ ತಂಡಗಳ ನಿಜವಾದ ಬಣ್ಣ ಬಯಲಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಮೇಲೆ ತಿಳಿಸಿರುವ ವಿಷಯಗಳಿಗೆ ಸಂಬಂ„ಸಿದಂತೆ, ಒಂದು ತನಿಖಾ ತಂಡವನ್ನು ರಚಿಸುವುದರ ಜೊತೆಗೆ ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಇತರೆ ಮಹಾನಗರಗಳ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಅಪಘಾತ ಪ್ರಕರಣಗಳ ರೋಗಿಗಳನ್ನು ದಾಖಲಿಸಿಕೊಳ್ಳುವ ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡುವ ಸಂಬಂಧ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ವಾರಸುದಾರರು ಪತ್ತೆಯಾಗದ ಮತ್ತು ಅನಾಥ ರೋಗಿಗಳು ಮತ್ತು ಶವಗಳ ಪರಿಶೀಲನಾ ಸಮಿತಿಯನ್ನು ರಚಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.ಹಾಗೆಯೇ ಇದೇ ವಿಷಯಕ್ಕೆ ಸಂಬಂ„ಸಿದಂತೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅವರು ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.