ಮಣಿಪುರದಲ್ಲಿ ಜನಾಂಗೀಯ ಗಲಭೆ ಆರಂಭವಾಗಿ ನಾಲ್ಕು ತಿಂಗಳಾದರೂ ಕೂಡ ಅದನ್ನು ನಿಯಂತ್ರಣ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರಕಾರಗಳು ಮಾಡಿಲ್ಲ. ಇದು ಸಂಪೂರ್ಣ ಕಾನೂನು ವ್ಯವಸ್ಥೆ ವಿಫಲತೆಗೆ ಸಾಕ್ಷಿ ಎಂದು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಎ.ಸಿ.ವಿನಯ್ ರಾಜ್ ಹೇಳಿದ್ದಾರೆ.
ಅವರು ಮಂಗಳೂರು ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಣಿಪುರ ಗಲಭೆ ಸರಕಾರ ಪ್ರಾಯೋಜಿತವಾಗಿ ಪೊಲೀಸರ ಸಮ್ಮುಖದಲ್ಲಿ ನಡೆಯುತ್ತಿದೆ. ಇಲ್ಲಿನ ಕಾನೂನು ವ್ಯವಸ್ಥೆಗಳೇ ಕೆಟ್ಟು ಹೋಗಿದೆ. ಪ್ರಧಾನಿ ಮಂತ್ರಿ ಮನಸ್ಸು ಮಾಡಿದ್ರೆ ಅದನ್ನು ಮೊದಲೇ ನಿಯಂತ್ರಣ ಮಾಡಬಹುದಿತ್ತು. ಅವರು ದೇಶ- ವಿದೇಶ ಸುತ್ತಾಟ, ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿಯೇ ತಲ್ಲೀನರಾದರು ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಎಚ್ಚರಿಕೆ ಕೊಟ್ಟಾಗ ಮಾತ್ರ ಪ್ರಧಾನಿ ಮೋದಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮಹಿಳೆಯರ ರಕ್ಷಣೆಯ ಕುರಿತಾದ ಕಾನೂನುಗಳನ್ನು ಸುಭದ್ರ ಮಾಡಿ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಆದರೆ ಬಿಲ್ಕಿಸ್ ಬಾನು, ಹತ್ರಾಸ್ ,ಉನಾವೋ ಪ್ರಕರಣ, ಬ್ರಿಜ್ ಭೂಷಣ್ ನಂತಹ ಪ್ರಕರಣಗಳು ಕಾಣಿಸಿಕೊಂಡಾಗಲೇ ಮಹಿಳೆಯರ ಮೇಲಿನ ಗೌರವದಿಂದ ಅವರಿಗೆ ರಕ್ಷಣೆ ನೀಡುವ ಕಾರ್ಯವನ್ನು ಮಾಡಬಹುದಿತ್ತು.
ಮಣಿಪುರ ಘಟನೆಯನ್ನು ನಿಯಂತ್ರಣ ಮಾಡುವ ಎಲ್ಲ ಸಾಧ್ಯತೆಗಳು ಇತ್ತು ಆದರೆ ಪ್ರಧಾನಿ, ಗೃಹಸಚಿವರು ಇಂತಹ ಕೆಲಸವನ್ನು ಮಾಡೇ ಇಲ್ಲ. ಕೇಂದ್ರ ಸಚಿವರಾದ ಸ್ಪೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ಕೇಂದ್ರದ ಯಾವ ಸಚಿವರು ಕೂಡ ಈ ಕುರಿತು ಮಾತನಾಡುತ್ತಿಲ್ಲ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಕೇಂದ್ರವನ್ನು ಕೇಳುವ ಕೆಲಸವನ್ನು ಮಾಡಿಲ್ಲ. ಮಾನವ ಆಯೋಗ, ಮಹಿಳಾ ಆಯೋಗಗಳು ಸ್ವಾತಂತ್ರ್ಯವಾದ ಸಂಸ್ಥೆಗಳು ಕೂಡ ಕೇಂದ್ರದ ಮುಲಾಜಿಗೆ ಬಿದ್ದು ಶಕ್ತಿ ಗುಂದಿವೆ ಎಂದು ವಿನಯ್ ರಾಜ್ ಆರೋಪಿಸಿದರು.