ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಜನರಿಂದ ಹಣ ಪಡೆದರೆ ಅಥವಾ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರಿದರೆ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಎಚ್ಚರಿಕೆ ನೀಡಿದರು.
ನೋಂದಣಿ ಪ್ರಕ್ರಿಯೆಗೆ ಜನರಿಂದ ಹಣ ಪಡೆಯುತ್ತಿದ್ದ ಮೂರು ಕೇಂದ್ರಗಳ ಲಾಗಿನ್ ಐಡಿ ಹಿಂಪಡೆಯಲಾಗಿದೆ. ಯೋಜನೆ ದುರ್ಬಳಕೆ ತಡೆಯಲು ಸರ್ಕಾರ ಕ್ರಮ ಕೈಗೊಂಡೊದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಫಲಾನುಭವಿಗಳಿಂದ ಹಣ ಪಡೆಯುವುದು ಕಂಡುಬಂದರೆ, ಅಂತಹವರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಹಿಂಪಡೆಯಬೇಕು. ನಿಯಮ ಗಾಳಿಗೆ ತೂರಿದವರ ವಿರುದ್ಧ ಪ್ರಕರಣವನ್ನೂ ದಾಖಲಿಸಲು ಸೂಚಿಸಲಾಗಿದೆ. ಎಲ್ಲಿಯೇ ಹಣ ಪಡೆಯುತ್ತಿರುವುದು ಕಂಡುಬಂದರೆ ತಹಶೀಲ್ದಾರರು, ಪಿಡಿಒಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿಯವರ ಗಮನಕ್ಕೆ ತರಬೇಕು. ಪೊಲೀಸ್ ಠಾಣೆಗೂ ಮಾಹಿತಿ ಕೊಡಬೇಕು ಎಂದರು.