ಬೆಂಗಳೂರು: ಕರ್ನಾಟಕದ ಎಲ್ಲಾ 30 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ (NEP) 2020’ ಅನ್ನು ರದ್ದುಗೊಳಿಸದೆ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ವರದಿಯಾಗಿದೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ (MC Sudhakar) ಅವರು ಶುಕ್ರವಾರ ಉಪಕುಲಪತಿಗಳ ಜತೆ ಸುದೀರ್ಘ ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಇದೇ ವೇಳೆ ಎನ್ಇಪಿಯ ಸಾಧಕ-ಬಾಧಕಗಳ ಕುರಿತು ಸಚಿವರು ಉಪಕುಲಪತಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರಕಾರವು ಎನ್ಇಪಿಯನ್ನು ರದ್ದುಪಡಿಸಿ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಪರಿಚಯಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು.
ವಿಮಾನ ದುರಂತ : ಐವತ್ತು ದಿನಗಳ ನಂತರ ಅಮೆಜಾನ್ ಅರಣ್ಯದಲ್ಲಿ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು!
ಎನ್ಇಪಿಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಪರಿಗಣಿಸಿದ ನಂತರ, ಉಪಕುಲಪತಿಗಳ ಒಟ್ಟಾರೆ ಅಭಿಪ್ರಾಯವು ನೀತಿಯನ್ನು ಮುಂದುವರೆಸುವ ಪರವಾಗಿ ಇತ್ತು. ಈ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ರಾಜ್ಯದ ವಿಶ್ವವಿದ್ಯಾಲಯಗಳು ವಿವಿಧ ಹಂತಗಳಲ್ಲಿ ಅದರ ಅನುಷ್ಠಾನದಲ್ಲಿ ಈಗಾಗಲೇ ಎರಡು ವರ್ಷ ಮುಂದಿವೆ ಎಂದು ಉಪಕುಲಪತಿಗಳು ತಿಳಿಸಿದ್ದಾರೆ ಎಂಬುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಆದಾಗ್ಯೂ, ಉಪಕುಲಪತಿಗಳು ಎನ್ಇಪಿಯ ಕೆಲವು ನಿಬಂಧನೆಗಳನ್ನು ಅನುಷ್ಠಾನಗೊಳಿಸುವಲ್ಲಿನ ಸವಾಲುಗಳ ಬಗ್ಗೆಯೂ ಸಚಿವರ ಗಮನ ಸೆಳೆದಿದ್ದಾರೆ. ಬಹುಶಿಸ್ತೀಯ ಕೋರ್ಸ್ಗಳ ಕೊಡುಗೆ ಮತ್ತು ಎನ್ಇಪಿ ಅಡಿಯಲ್ಲಿ ಮುಕ್ತ ಚುನಾಯಿತ ವಿಷಯಗಳನ್ನು ಬೋಧಿಸಲು ಅಧ್ಯಾಪಕರ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಎನ್ಇಪಿಯ ವಿವಿಧ ಅಂಶಗಳನ್ನು ಅಳವಡಿಸಿದ್ದೇವೆ. ಕೆಲವು ನಿಬಂಧನೆಗಳ ಬಗ್ಗೆ ಕಳವಳಗಳಿದ್ದರೂ, ಮಧ್ಯಸ್ಥಿಕೆಗಳ ಮೂಲಕ ಪರಿಹರಿಸಬಹುದಾಗಿದೆ. ಎರಡು ವರ್ಷಗಳ ಅನುಷ್ಠಾನದ ನಂತರ ಎನ್ಇಪಿಯನ್ನು ರದ್ದುಗೊಳಿಸುವುದು ಪ್ರಾಯೋಗಿಕವಾಗಿರುವುದಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿದ್ಯಾಶಂಕರ್ ಎಸ್ ಅವರು ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ.
ಸಚಿವ ಎಂಸಿ ಸುಧಾಕರ್ ಅವರು ಕಳೆದ ವಾರದಿಂದ ಶಿಕ್ಷಣ ತಜ್ಞರು, ಮಾಜಿ ಉಪಕುಲಪತಿಗಳು ಮತ್ತು ಉನ್ನತ ಶಿಕ್ಷಣ ಅಧಿಕಾರಿಗಳಿಂದ ಎನ್ಇಪಿ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದಾದ ನಿಬಂಧನೆಗಳನ್ನು ಪರಿಶೀಲಿಸಲು ಸಚಿವರು ಮುಂದಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರವು ಎನ್ಇಪಿಯನ್ನು ತರಾತುರಿಯಲ್ಲಿ ಅಂಗೀಕರಿಸಿದೆಯೇ ಎಂಬುದನ್ನು ಅರಿಯಲೂ ಪ್ರಯತ್ನಿಸುತ್ತಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಒಟ್ಟಾಗಿ ಸಿದ್ಧಪಡಿಸಿದ ಎನ್ಇಪಿ ವರದಿಯನ್ನು ಅಂತಿಮ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.