ಚಿತ್ರದುರ್ಗ: ನಗರದ ಮಾದಾರ ಚನ್ನಯ್ಯ ಮಠದ ಬಳಿ ಮೈದಾನದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಸ್ವೀಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೊಂದು ಐತಿಹಾಸಿಕ ಸಮಾವೇಶ. ಶೋಷಣೆ ನಡೆಯುತ್ತಲೇ ಇದೆ, ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಣೆ ನಡೆದಿದೆ. ಸಂವಿಧಾನದಿಂದಾಗಿ ಶೋಷಣೆ ಕಡಿಮೆಯಾಗಿದೆ. ಮೀಸಲಾತಿಯನ್ನ ಆರ್ಎಸ್ಎಸ್, ಬಿಜೆಪಿ ವಿರೋಧ ಮಾಡುತ್ತಿದೆ. ಕೆಲವು ಶಕ್ತಿಗಳು ನನ್ನನ್ನು ವಿರೋಧ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಕಾಂತರಾಜು ಸಮಿತಿ ಮಾಡಿದ್ದು ನಾನೇ. ನಾನು ಸಿಎಂ ಸ್ಥಾನದಿಂದ ಇಳಿಯುವಾಗ ವರದಿ ಪೂರ್ಣ ಆಗಿರಲಿಲ್ಲ. ಮಾಜಿ ಸಿಎಂಗಳಾದ ಹೆಚ್ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ವರದಿ ಪಡೆಯಲಿಲ್ಲ. ಈಗ ಜಯಪ್ರಕಾಶ್ ಹೆಗ್ಡೆ ವರದಿ ಕೊಡುತ್ತಾರೆ. ನೀವು ವರದಿ ಕೊಡಿ ಅಂತ ನಾನು ಹೇಳಿದ್ದೇನೆ. ಲೋಪದೋಷ ಇದ್ದರೆ ತಜ್ಞರ ಸಲಹೆ ಪಡೆಯುತ್ತೇನೆ ಎಂದರು.































