ಎಕ್ಕದ ಗಿಡದಲ್ಲಿದೆ ಲೆಕ್ಕಿಸದಷ್ಟು ಆರೋಗ್ಯ ಗುಣ

ವಿಷದ ಗಿಡವೆಂದರೂ ಸರಿಯಾದ ರೀತಿಯಲ್ಲಿ ಬಳಸಿದರೆ ಹಲವು ಆರೋಗ್ಯ ಸುಧಾರಿಸುವ ಗುಣಗಳನ್ನು ಹೊಂದಿರುವ ಎಕ್ಕದ ಗಿಡದ ಪ್ರಯೊಜನದ ಬಗ್ಗೆ ಇಲ್ಲಿದೆ ಮಾಹಿತಿ. ಕೇವಲ ದೇವರ ಪೂಜೆಗೆ ಎಂದುಕೊಂಡಿದ್ದ ಎಷ್ಟೋ ಗಿಡಗಳು ಆರೋಗ್ಯ ವೃದ್ಧಿಸುವ ಗುಣಗಳನ್ನು ಹೊಂದಿರುತ್ತವೆ. ಅನಾರೋಗ್ಯವನ್ನು ಹೋಗಲಾಡಿಸಲು ಸುಲಭ ಮನೆಮದ್ದಾಗಿ ಸಿಗುತ್ತವೆ. ಅಂತಹವುಗಳಲ್ಲಿ ಎಕ್ಕದ ಗಿಡ ಕೂಡ ಒಂದು. ಇದರಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ಎಕ್ಕದ ಗಿಡ, ಇನ್ನೊಂದು ನೀಲಿ ಬಣ್ಣದ ಎಕ್ಕದ ಗಿಡ. ಬಿಳಿ ಎಕ್ಕ ಆರೋಗ್ಯ ಗುಣಗಳನ್ನು ಹೊಂದಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಹೂವುಗಳಲ್ಲಿ ಈ ಎಕ್ಕದ ಹೂವು ಕೂಡ ಒಂದು. ಶಿವರಾತ್ರಿಯಂದು ಈ ಎಕ್ಕದ ಹೂವಿಗೆ ವಿಶೇಷ ಬೇಡಿಕೆ ಇರುತ್ತದೆ. ಅದೇ ರೀತಿ ಆರೋಗ್ಯದ ವಿಷಯಕ್ಕೆ ಬಂದಾಗ ಎಕ್ಕದ ಗಿಡ ಶ್ರೀಮಂತವಾಗಿದೆ. ಮುಳ್ಳು ತಾಗಿದರೆ, ಚೇಳು ಅಥವಾ ಇನ್ನಿತರ ವಿಷಜಂತುಗಳು ಕಡಿದಾಗ ಈ ಎಕ್ಕದ ಗಿಡದ ಹಾಲನ್ನು ಹಚ್ಚುತ್ತಾರೆ. ಅದರೆ ಮಹತ್ವದ ಸಂಗತಿಯೆಂದರೆ ಎಕ್ಕದ ಗಿಡದ ಹಾಲು ಕಣ್ಣಿಗೆ ಸಿಡಿಯಬಾರದು. ಸಿಡಿದರೆ ಕಣ್ಣು ಕುರುಡಾಗುವ ಅಪಾಯವಿರುತ್ತದೆ. ಹೀಗಾಗಿ ಬಳಕೆಯ ವೇಳೆ ಜಾಗೃತರಾಗಿರಿ. ಚಿಕ್ಕಮಕ್ಕಳ ಕೈಗಂತೂ ಸಿಗದಿದ್ದರೇನೆ ಒಳಿತು. ಎಕ್ಕದ ಗಿಡದಿಂದ ಎಷ್ಟು ಆರೋಗ್ಯಕ್ಕೆ ಒಳ್ಳೆಯ ಗುಣವಿದೆಯೋ ಅಷ್ಟೇ ಅಪಾಯ ಕೂಡ ಇದೆ ಎನ್ನಬಹುದು. ಹಾಗಾದರೆ ಎಕ್ಕದ ಗಿಡ ಯಾವೆಲ್ಲಾ ರೀತಿಯ ಆರೋಗ್ಯ ಸಮಸ್ಯಗಳಿಗೆ ಪರಿಹಾರ ನೀಡಬಲ್ಲದು ಎನ್ನುವುದನ್ನು ತಿಳಿದುಕೊಳ್ಳಿ. ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕೊರತೆಯಾಗುತ್ತದೆ. ಇದರಿಂದ ಕುಳಿತರೂ, ನಿಂತರೂ ನೋವು ಕಾಡಲಾರಂಭಿಸುತ್ತದೆ. ಇದಕ್ಕೆ ಎಕ್ಕದ ಎಲೆ ಪರಿಹಾರ ನೀಡುತ್ತದೆ. ಮಂಡಿನೋವು ಇರುವವರು ಎಕ್ಕದ ಎಲೆಯನ್ನು ಸುಟ್ಟು ಬಿಸಿ ಇರುವಾಗಲೇ ಅದನ್ನು ನೋವಿರುವ ಜಾಗದಲ್ಲಿ ಇರಿಸಿಕೊಂಡು ಬಟ್ಟೆಯನ್ನು ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ. ದಿನದಲ್ಲಿ ಒಂದು ಅಥವಾ ಎರಡು ಬಾರಿ ಈ ರೀತಿ ಮಾಡಿದರೆ ಉತ್ತ ಫಲಿತಾಂಶ ಕಂಡುಕೊಳ್ಳಬಹುದಾಗಿದೆ. ಎಕ್ಕದ ಗಿಡ ವಿಷವಾದರೂ ಸರಿಯಾಗಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಒಳಿತಾಗುವ ಹಲವು ಗುಣಗಳನ್ನು ಒಳಗೊಂಡಿದೆ. ಎಕ್ಕದ ಗಿಡದ ಹೂವನ್ನು ಒಣಗಿಸಿ ಪುಡಿ ಮಾಡಿ ಚೂರ್ಣದಂತೆ ಮಾಡಿಟ್ಟುಕೊಂಡರೆ ಅಸ್ತಮಾ ರೋಗಿಗಳಿಗೆ ಉತ್ತಮ ಔಷಧವಾಗಿದೆ. ಪ್ರತಿದಿನ ಈ ಚೂರ್ಣದ ಸೇವನೆಯನ್ನು ಮಾಡುತ್ತಿದ್ದರೆ ಅಸ್ತಮಾ, ದುರ್ಬಲತೆ, ಶ್ವಾಸಕೋಶದ ಸಮಸ್ಯೆಗಳು ದೂರವಾಗುತ್ತದೆ. ದಮ್ಮು ರೋಗವಿರುವವರು ಕೂಡ ಈ ಚೂರ್ಣವನ್ನು ಸೇವನೆ ಮಾಡುವುದರಿಂದ ಶ್ವಾಸಕೋಶದಲ್ಲಿ ಹಿಡಿತವಾಗುವ ಅನುಭವ ಸರಿಹೋಗುತ್ತದೆ. ಪ್ರಾಚೀನ ಕಾಲದಿಂದಲೂ ಎಕ್ಕದ ಗಿಡವನ್ನು ಔಷಧೀಯ ಗಿಡವಾಗಿ ಬಳಸುತ್ತಿದ್ದಾರೆ. ಕಾಲು ಅಥವಾ ಇತರ ದೇಹದ ಮೇಲಾಗುವ ಊತವನ್ನು ಕಡಿಮೆ ಮಾಡಲು ಎಕ್ಕದ ಎಲೆ ಸಹಕಾರಿಯಾಗಿದೆ. ಎಕ್ಕದ ಎಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಊತವಿರುವ ಜಾಗದಲ್ಲಿ ಇಡಬೇಕು. ಒಂದು ವಾರಗಳ ಕಾಲ ಹೀಗೆ ಮಾಡುವುದಿರಿಂದ ಕಾಲಿನ ಊತ ಕಡಿಮೆಯಾಗುತ್ತದೆ. ಶರೀರದ ಮೇಲೆ ಗಾಯಗಳಾದರೆ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ನೋವು ಕೂಡ ಬೇಗನೆ ವಾಸಿಯಾಗುತ್ತದೆ. ಎಕ್ಕದ ಗಿಡದ ಎಲೆಯ ತುದಿಯಲ್ಲಿ ಬರುವ ಬಿಳಿಯ ಬಣ್ಣದ ಹಾಲನ್ನು ನಂಜಿನ ಈಟಗಲು ಕಚ್ಚಿರುವ ಜಾಗದಲ್ಲಿ ಹಚ್ಚದರೆ ದೇಹಕ್ಕೆ ನಂಜು ಅಂಟುವುದಿಲ್ಲ. ಅಲ್ಲದೆ ಮುಳ್ಳು ಚುಚ್ಚಿದ್ದರೆ ಈ ಹಾಲನ್ನು ಮುಳ್ಳು ಚುಚ್ಚಿದ ಜಾಗದಲ್ಲಿ ಹಾಕಿದರೆ ಮುಳ್ಳು ಹೊರಗೆ ಬರುತ್ತದೆ. ಚೇಳು ಕಚ್ಚಿದ್ದರೆ ಆ ಜಾಗಕ್ಕೆ ಎಕ್ಕದ ಗಿಡದ ಹಾಲನ್ನು ಹಾಕಿದರೆ ನೋವು ಬೇಗನೆ ಕಡಿಮೆಯಾಗುತ್ತದೆ. ವಿಷ ಕೂಡ ದೇಹಕ್ಕೆ ಹೋಗದಂತೆ ತಡೆಯುತ್ತದೆ. ಇತ್ತೀಚೆಗಂತೂ ಮಧುಮೇಹ ಎಲ್ಲರಲ್ಲೂ ಇರುವ ಸಾಮಾನ್ಯ ಕಾಯಿಲೆಯಂತಾಗಿದೆ. ಮಧುಮೇಹಕ್ಕೆ ಸಾಕಷ್ಟು ಔಷಧಗಳಿದ್ದರೂ ಮೂಲಿಕೆಗಳ ಔಷಧ ಹೆಚ್ಚು ಪರಿಣಾಮಕಾರಿಯಾಗಿದೆ. ಮಧುಮೇಹ ನಿಯಂತ್ರಣಕ್ಕೆ ಎಕ್ಕದ ಎಲೆ ಸಹಕಾರಿಯಾಗಿದೆ. ಹೌದು, ಎಕ್ಕದ ಎಲೆಗಳನ್ನು ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಪಾದದ ಕೆಳಗೆ ಇಟ್ಟು ಬಟ್ಟೆ ಸುತ್ತಿಕೊಂಡು ಮಲಗಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದು ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಆದರೂ ಎಕ್ಕದ ಗಿಡವನ್ನು ಬಳಸುವ ಮುನ್ನ ವೈದ್ಯರಲ್ಲಿ ಆಥವಾ ಆಯುರ್ವೇದ ಪಂಡಿತರಲ್ಲಿ ಸಲಹೆ ಪಡೆಯುವುದು ಒಳ್ಳೆಯದು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement