ಜಂಟಿಖಾತೆಯಲ್ಲಿದ್ದ ನಿವೇಶನವನ್ನು ಅಕ್ರಮವಾಗಿ ಇ-ಸ್ವತ್ತು ಮಾಡಿದ ಪಿಡಿಒ ಅಮಾನತು

 

ಚಿತ್ರದುರ್ಗ: ಜಂಟಿ ಖಾತೆಯಲ್ಲಿದ್ದ ನಿವೇಶನಗಳನ್ನು ಅಕ್ರಮವಾಗಿ ಇತರೆ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಟ್ಟು, ಇ-ಸ್ವತ್ತು ಖಾತೆ ಮಾಡಿದ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯತ್ ಪಿಡಿಒ ಬಸವರಾಜು ಎಸ್. ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ.

ತಿಪ್ಪಮ್ಮ ಇವರ ಹೆಸರಿನಲ್ಲಿನ ಸೈಟ್ ನಂ. 31 ಹಾಗೂ 32 ಸ್ವತ್ತನ್ನು ವೈನ್ ಶಾಪ್ ಅಂಗಡಿ ವ್ಯವಹಾರ ನಡೆಸುವುದಕ್ಕಾಗಿ ಯರಬಳ್ಳಿ ಗ್ರಾಮ ಪಂಚಾಯತ್‍ನ ಕಂದಿಕೆರೆ ಗ್ರಾಮದ ಕೆ.ವಿ. ಉಮಾದೇವಿ ಹಾಗೂ ಆರ್. ಹೊರಕೇರಪ್ಪ ಅವರು ಹಿರಿಯೂರಿನ ಉಪನೊಂದಣಿ ಕಚೇರಿಯಲ್ಲಿ ಕಳೆದ 2017 ರ ಫೆಬ್ರವರಿ 13 ರಂದು ಜಂಟಿ ಖಾತೆಯಾಗಿ ನೊಂದಣಿ ಮಾಡಿಸಿಕೊಂಡಿದ್ದರು.  ಆದರೆ ಇದನ್ನು ಅಕ್ರಮವಾಗಿ ನಕಲಿ ಮತ್ತು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಆರ್. ಹೊರಕೇರಪ್ಪ ಇವರ ಖಾತೆಗೆ ಮಾಡಿ, ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಇ-ಸ್ವತ್ತು ಮಾಡಿಕೊಟ್ಟು ಅಧಿಕಾರದ ದುರುಪಯೋಗ ಮಾಡಿರುತ್ತಾರೆ ಎಂಬುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಹಿರಿಯೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಂಡಿದ್ದರು, ಈ ಬಗ್ಗೆ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯವರಿಗೆ ಆದೇಶಿಸಲಾಗಿತ್ತು.  ಅದರನ್ವಯ ಜಿ.ಪಂ. ಉಪಕಾರ್ಯದರ್ಶಿ ಅವರು ಸಲ್ಲಿಸಿರುವ ವರದಿ ಆಧಾರದಲ್ಲಿ, ಯರಬಳ್ಳಿ ಗ್ರಾಮ ಪಂಚಾಯತ್ ಪಿಡಿಒ ಬಸವರಾಜು ಎಸ್. ಅವರು ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾಗಿ, ಅಕ್ರಮವಾಗಿ, ಕಾನೂನು ಬಾಹಿರವಾಗಿ ಇ-ಸ್ವತ್ತುಗಳನ್ನು ಮಾಡಿ, ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement