ಡಿಸಿ ನಿರ್ಲಕ್ಷ್ಯದಿಂದ ರೈತಮುಖಂಡ ಅಸ್ವಸ್ಥ : ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಆಗ್ರಹ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಭದ್ರಾ ಯೋಜನೆಗೆ ಅನುದಾನಕ್ಕೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಸಂಬಂಧ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ ಪರಿಣಾಮ ಉಪವಾಸ ಕುಳಿತಿದ್ದ ರೈತನಾಯಕ ಕೆ.ಟಿ.ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ರೈತ, ಕನ್ನಡಪರ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರುಗಳು, ಜಿಲ್ಲಾಡಳಿತ, ಜಿಲ್ಲಾ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಯೋಜನೆಗೆ ಅನುದಾನಕ್ಕೆ ಸಂಬಂಧ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಫೆಬ್ರವರಿ 4ರಂದು ಜಿಲ್ಲೆಯಲ್ಲಿ ಮುಷ್ಕರ ಆರಂಭಿಸಿದೇವು. ತಾಲ್ಲೂಕುಗಳು ಬಂದ್, ಕಾಲ್ನಡಿಗೆ ಜಾಥಾ, 13ರಂದು ಚಿತ್ರದುರ್ಗದಲ್ಲಿ ನಾಲ್ಕು ಸಾವಿರ ಜನರನ್ನೊಳಗೊಂಡ ಬಹಿರಂಗ ಸಮಾವೇಶ ನಡೆಸಿದೇವು. ಇಲ್ಲಿಗೆ ಜಿಲ್ಲಾ ಸಚಿವ ಡಿ.ಸುಧಾಕರ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಗಮಿಸಿ ಮನವಿ ಸ್ವೀಕರಿಸಿ, ಅನುದಾನದ ಭರವಸೆ ನೀಡಿದರು. ಆದರೆ, ಈ ಸಂಬಂಧ ಜಿಲ್ಲಾಡಳಿತ ನಮ್ಮನ್ನು ಕತ್ತಲಲ್ಲಿಟ್ಟಿತು ಎಂದು ದೂರಿದರು.

ಸರ್ಕಾರದ ಮೇಲೆ ಒತ್ತಡ ತರಲು ಅನಿವಾರ್ಯವಾಗಿ ನಾವು ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಮಾ.2ರಂದು ಆರಂಭಿಸುವುದಾಗಿ ಫೆ.24ರಂದೇ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದ್ದೇವು. ಈ ಮಧ್ಯೆಯೂ ಸಂಘದೊಂದಿಗೆ ಮಾತುಕತೆ ನಡೆಸುವ ಸೌಜನ್ಯ ಜಿಲ್ಲಾಧಿಕಾರಿ ಪ್ರದರ್ಶಿಸಲಿಲ್ಲ. ಪರಿಣಾಮ ಮಾ.2ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿಯೇ ಬಿಟ್ಟೇವು ಎಂದು ಮಾಹಿತಿ ನೀಡಿದರು.

ಆ ಬಳಿಕವೂ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿ, ಉಪವಾಸ ಕೈಬಿಡುವಂತೆ ಮನವೊಲಿಸಲಿಲ್ಲ. ಕೆಡಿಪಿ ಸಭೆಯಲ್ಲಿ ಸಚಿವರು, ಶಾಸಕರು ಪಾಲ್ಗೊಂಡಿದ್ದರೂ ಸ್ಥಳಕ್ಕೆ ಬರಲಿಲ್ಲ. ಮುಖ್ಯವಾಗಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಂತೆ ಅಗತ್ಯ ವೈದ್ಯಕೀಯ, ಪೊಲೀಸ್ ರಕ್ಷಣೆ ವ್ಯವಸ್ಥೆ ಜಿಲ್ಲಾಡಳಿತ ಮಾಡಲಿಲ್ಲ. ಮೂರನೇ ದಿನ ರಾತ್ರಿ ಮೂವರು ಅಸ್ವಸ್ಥಗೊಂಡಾಗ ಇಬ್ಬರು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದೂ ಹೊರತುಪಡಿಸಿದರೆ ಮತ್ಯಾವುದೇ ರೀತಿ ಮೇಲಧಿಕಾರಿಗಳು ಸ್ಪಂದಿಸಲಿಲ್ಲ ಎಂದು ದೂರಿದರು.

50 ಮೀಟರ್ ದೂರದಲಿದ್ದ ಜಿಲ್ಲಾಧಿಕಾರಿ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಅಸಡ್ಡೆ ಪ್ರದರ್ಶಿಸಿದ್ದರಿಂದ ನಾನು ಸತ್ತರೂ ಚಿಂತೆಯಿಲ್ಲ ಜಿಲ್ಲೆಗೆ ಭದ್ರೆ ನೀರು ಹರಿದು ಲಕ್ಷಾಂತರ ಬದುಕು ಹಸನಾಗಲೆಂದು ಅನಿವಾರ್ಯವಾಗಿ ಕೆ.ಟಿ.ತಿಪ್ಪೇಸ್ವಾಮಿ ಉಪವಾಸ ಸತ್ಯಾಗ್ರಹ ಮುಂದುವರಿಸಿದರು. ನಮ್ಮೆಲ್ಲರ ಒತ್ತಡಕ್ಕೆ ಮಣಿದು 5ನೇ ದಿನದಂದು ಉಪವಾಸ ಕೈಬಿಟ್ಟು ಮನೆ ಬಾಗಿಲಿಗೆ ತೆರಳುತ್ತಿದ್ದಂತೆ ಕುಸಿದುಬಿದ್ದು ತೀವ್ರ ಅಸ್ವಸ್ಥಗೊಂಡು, ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 20 ಲಕ್ಷಕ್ಕೂ ಹೆಚ್ಚು ಮೊತ್ತ ವೆಚ್ಚವಾಗಿದೆ. ಇದಕ್ಕೆಲ್ಲ ನೇರ ಹೊಣೆ ಜಿಲ್ಲಾಧಿಕಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಳವಳಿಗಾರರನ್ನು ಹತ್ತಿಕ್ಕುವ ಕೆಲಸ ಮಾಡಿರುವ, ರೈತಮುಖಂಡ ಅನಾರೋಗ್ಯಕ್ಕೆ ಒಳಗಾಗಲು ನೇರ ಹೊಣೆ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ವಿರುದ್ಧ ಸರ್ಕಾರ ಶಿಸ್ತುಕ್ರಮಕೈಗೊಳ್ಳಬೇಕು. ಜೊತೆಗೆ ಕೆ.ಟಿ.ತಿಪ್ಪೇಸ್ವಾಮಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.

ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಬೇಡರೆಡ್ಡಿ ಬಸವರೆಡ್ಡಿ, ಈಚಘಟ್ಟ ಸಿದ್ದವೀರಪ್ಪ, ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್ಕುಮಾರ್, ಆರ್.ಶೇಷಣ್ಣಕುಮಾರ್, ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಸಂಗೊಳ್ಳಿ ರಾಯಣ್ಣ ಸೇನೆ ರಾಜ್ಯಾಧ್ಯಕ್ಷ ಟಿ.ಆನಂದ್, ಟಿಪ್ಪುಸುಲ್ತಾನ್ ವೇದಿಕೆ ರಾಜ್ಯಾಧ್ಯಕ್ಷ ಖಾಸೀಂ ಆಲಿ, ಭೋವಿ ಸಂಘದ ಎಚ್.ಲಕ್ಷ್ಮಣ್, ವೀಣಾಗೌರಮ್ಮ, ಶ್ರೀನಿವಾಸ ನಾಯ್ಕ್, ಜಿ.ಕೆ.ರಾಮಲಿಂಗಪ್ಪ, ಎನ್.ಮಂಜುನಾಥ್, ಪ್ರಸನ್ನಕುಮಾರ್, ರಂಗಸ್ವಾಮಿ ಇತರರಿದ್ದರು.

ಭದ್ರೆಗೆ ಅನುದಾನ ಸ್ಪಷ್ಟತೆ ನೀಡಲಿ

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮನ್ನಣೆ ನೀಡುತ್ತೇವೆ ಎನ್ನುವ ಜೊತೆಗೆ 5,300 ಕೋಟಿ ರೂ. ಬಜೆಟ್ನಲ್ಲಿ ಘೋಷಿಸಿ, ಈಗ ಜಿಲ್ಲೆಯ ಜನರನ್ನು ಕೇಂದ್ರ ಸರ್ಕಾರ ವಂಚಿಸುತ್ತಿದೆ ಎಂದು ಚಿಂತಕ ಪ್ರೊ.ಜೆ.ಯಾದವರೆಡ್ಡಿ ಆರೋಪಿಸಿದರು. ಜೊತೆಗೆ ರಾಜ್ಯ ಸರ್ಕಾರ ಎಲ್ಲ ಯೋಜನೆಗಳಿಗೆ ಹಣ ಇಟ್ಟರೇ ಭದ್ರಾ ಯೋಜನೆಯನ್ನು ನಿರ್ಲಕ್ಷ್ಯಿಸುತ್ತಿದೆ. ಈ ಎರಡು ಸರ್ಕಾರಗಳು ಮೋಸವನ್ನು ಮುಂದುವರಿಸಿವೆ. ಜೊತೆಗೆ ಚಳವಳಿಗಾರ ತಿಪ್ಪೇಸ್ವಾಮಿ ಅಸ್ವಸ್ಥಕ್ಕೆ ಜಿಲ್ಲಾಡಳಿತ ಹೊಣೆ ಆಗಿದೆ ಎಂದು ದೂರಿದರು.

ಡಿಸಿ ಕ್ಷಮೆಯಾಚಿಸಲಿ

ಅನ್ನದಾತರ ಹೋರಾಟದತ್ತ ಅಸಡ್ಡೆ ತೋರಿ, ರೈತಮುಖಂಡ ಅಸ್ವಸ್ಥಗೊಳ್ಳಲು ನೇರ ಕಾರಣವಾಗಿರುವ ಜಿಲ್ಲಾಧಿಕಾರಿ ಕೂಡಲೆ ಬಹಿರಂಗವಾಗಿ ರೈತರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಮಟ್ಟದ ನಾಯಕರ ನೇತೃತ್ವದಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಚಳವಳಿ ರೂಪಿಸಲಾಗುವುದು ಎಂದು ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಆಗ್ರಹಿಸಿದರು. ಉಪವಾಸ ಚಳವಳಿ ಆರಂಭ ದಿನವೇ ಕೆಡಿಪಿ ಸಭೆಯಲ್ಲಿ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರೂ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಪರಿಣಾಮ ಈಗ ಗಟ್ಟಿ ಹೋರಾಟಗಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬೇಸರಿಸಿದರು.

ಭದ್ರಾ ಯೋಜನೆಗೆ ಅನುದಾನ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಸ್ಪರ ಆರೋಪದಲ್ಲಿ ನಿರತವಾಗಿವೆ. ಕೇಂದ್ರ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಭದ್ರೆಗೆ ಎಷ್ಟು ಅನುದಾನ ಇಟ್ಟಿದ್ದೇವೆಂಬುದನ್ನು ಖಚಿತ ಪಡಿಸಬೇಕು.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೈತಸಂಘ

ಸಕಲ ಜೀವರಾಶಿಗೆ ಬೇಕಿರುವ ಜೀವನಲಕ್ಕೆ ಹೋರಾಟ ನಡೆಸಿದ ರೈತಮುಖಂಡನ ಹೋರಾಟ ಕಡೆಗಣಿಸಿರುವ ಜಿಲ್ಲಾಧಿಕಾರಿ ವರ್ತನೆ ಅಮಾನವೀಯ. ಮಠಾಧೀಶರು, ವಿದ್ಯಾರ್ಥಿಗಳು ಸೇರಿ ಎಲ್ಲರೂ ಹೋರಾಟ ನಡೆಸಬೇಕು.

ಕೆ.ಟಿ.ಶಿವಕುಮಾರ್, ಜಿಲ್ಲಾಧ್ಯಕ್ಷ, ವಿಜಯಸೇನೆ

ಧರಣಿ ಸ್ಥಳಕ್ಕೆ ಡಿಸಿ ಬಂದಿದ್ದರೇ ರೈತಮುಖಂಡನಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಚಳವಳಿಯನ್ನು ಲಘುವಾಗಿ ಪರಿಗಣಿಸಿದ್ದರಿಂದಲೇ ಅನ್ನದಾತ ಅಸ್ವಸ್ಥಗೊಂಡಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತ ಆಸ್ಪತ್ರೆಯಲ್ಲಿರುವುದು ನಾಗರಿಕ ಸಮಾಜಕ್ಕೆಕ ಅಪಮಾನ.

ಆರ್.ಶೇಷಣ್ಣಕುಮಾರ್, ನೀರಾವರಿ ಹೋರಾಟ ಸಮಿತಿ

ರೈತಮುಖಂಡನ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು. ಚಳವಳಿ ಕಡೆಗಣಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಸಚಿವರ ವಿರುದ್ಧ ಬೃಹತ್ ಹೋರಾಟ ನಡೆಸಬೇಕು. ಜಿಲ್ಲಾಧಿಕಾರಿ ವರ್ಗಾವಣೆಗೆ ತೀವ್ರ ಒತ್ತಡ ತರಬೇಕು. ಚುನಾಯಿತ ಪ್ರತಿನಿಧಿಗಳನ್ನು ಘೆರಾವ್ ಮಾಡಬೇಕು.

ಟಿ.ಆನಂದ್, ಅಧ್ಯಕ್ಷ, ಸಂಗೊಳ್ಳಿ ರಾಯಣ್ಣ ಸೇನೆ

ಆನೆಹೊಟ್ಟಿಗೆ ಅರೆಕಾಸಿನ ಮಜ್ಜಿಗೆ

ಭದ್ರಾ ಮೇಲ್ದಂಡೆ ದೇಶದ ಬಹುದೊಡ್ಡ ಯೋಜನೆ. 22 ಕೋಟಿ ರೂ. ವೆಚ್ಚದ ಯೋಜನೆ ಆಗಿದೆ. ಇದಕ್ಕೆ ಬೃಹತ್ ಮೊತ್ತದ ಹಣ ಕೊಡದೆ ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ರೀತಿ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ ಎಂದು ಪ್ರೊ.ಯಾದವರೆಡ್ಡಿ, ಈಚಘಟ್ಟ ಸಿದ್ದವೀರಪ್ಪ ಆರೋಪಿಸಿದರು. ಕೇಂದ್ರ ಸರ್ಕಾರ ಕೂಡ ಚುನಾವಣೆ ಕಾರಣಕ್ಕೆ ರಾಷ್ಟ್ರೀಯ ಯೋಜನೆ ಭರವಸೆ, ಬಜೆಟ್ನಲ್ಲಿ 5,300 ಕೋಟಿ ರೂ. ಘೋಷಣೆ ಮಾಡಿ ಈಗ ವಿವಿಧ ರೀತಿ ಮಾತುಗಳ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ಬೇಸರಿಸಿದರು.

 

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon