ದಾವಣಗೆರೆ: ಕರ್ನಾಟಕ ಸರ್ಕಾರ ನೀಡುವ 2023-24 ನೇ ಸಾಲಿನ ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಗೆ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಜೆ.ಪುನೀತ್ ಗೌಡ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯು ರೂ.೨೫ ಸಾವಿರ ನಗದು ಬಹುಮಾನ, ಉಲ್ಲೇಖ ಪತ್ರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಅತ್ಯುತ್ತಮ ಸಂಶೋಧನಾ ಪ್ರಕಟಣೆಯ ಪ್ರಶಸ್ತಿಯನ್ನು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳ ಅಧ್ಯಾಪಕರು ಹಾಗೂ ಸಂಶೋಧಕರಿಗೆ ಕರ್ನಾಟಕ ಸರ್ಕಾರವು ವಾರ್ಷಿಕವಾಗಿ ನೀಡಲಾಗುತ್ತಿದ್ದು, ಅತ್ಯುತ್ತಮ ಸಂಶೋಧನಾ ಪ್ರಕಟಣೆಗಳನ್ನು ಗುರುತಿಸಲು ಕರ್ನಾಟಕ ಸರ್ಕಾರದ ಭಾಗವಾದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿಯು ಒಂದು ಉಪಕ್ರಮವಾಗಿದೆ.
2020-21 ನೇ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಬಿ.ಸಿ.ಪ್ರಸನ್ನ ಕುಮಾರ ಹಾಗೂ 2022-23 ನೇ ಸಾಲಿನಲ್ಲಿ ಇವರ ವಿದ್ಯಾರ್ಥಿಯಾದ ಡಾ.ಆರ್ ನವೀನ್ ಕುಮಾರ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಬಾರಿಯ ಕಂಪ್ಯೂಟೆಶನ್ ಮತ್ತು ಗಣಿತ ವಿಭಾಗದಲ್ಲಿ ಡಾ.ಪುನೀತ್ ಗೌಡ ಇವರಿಗೆ ಪ್ರಶಸ್ತಿ ದೊರಕಿದ್ದು, ಇವರು ಕೂಡ ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಡಾ.ಬಿ.ಸಿ.ಪ್ರಸನ್ನಕುಮಾರ ರವರ ವಿದ್ಯಾರ್ಥಿಯಾಗಿದ್ದಾರೆ.
ಡಾ.ಪುನೀತ್ ಗೌಡ ಅವರ ಪ್ರಸುತ್ತ ದಾವಣಗೆರೆಯಲ್ಲಿನ ಬಿಐಇಟಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಅರವಿಂದ, ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕಾಲೇಜಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.