ನೋಂದಣಿಯಾಗದ ಮದರಸ, ಚರ್ಚ್‌, ಮಠಗಳಿಗೆ ಸಂಕಷ್ಟ!

ಬೆಂಗಳೂರು: ನೋಂದಣಿಯಾಗದ ಮದರಸ, ಚರ್ಚ್, ಮಠ ಹಾಗೂ ಎನ್‌ಜಿಒಗಳಿಗೆ ಈಗ ಸಂಕಷ್ಟ ಎದುರಾಗಿದೆ.

ನೋಂದಣಿ ಮಾಡಿಸಿಕೊಂಡಿರದೆ ಕಾರ್ಯಾಚರಿಸುತ್ತಿದ್ದರೆ ಅಂಥವರಿಗೆ ಕಾನೂನಿನ ಸಂಕಷ್ಟ ಎದುರಾಗಲಿದ್ದು, ಇವುಗಳಿಗೆ ಬೀಗ ಬೀಳಲಿದೆ.

ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಏಪ್ರಿಲ್ 20ರವರೆಗೆ ಡೆಡ್‌ಲೈನ್ ಇದ್ದು, ಅದರೊಳಗೆ ನೋಂದಣಿ ಮಾಡಿಸಿಕೊಳ್ಳದಿದ್ದರೆ ಆಮೇಲೆ‌ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಂದ ನೋಟೀಸ್‌ ಹೊರಟಿದೆ. ಇತ್ತೀಚೆಗೆ ಮಕ್ಕಳ ಹಕ್ಕುಗಳ ಆಯೋಗ ನಗರದಲ್ಲಿ ದಾಳಿ ನಡೆಸಿದಾಗ ಹಲವು ಅಕ್ರಮ ಮದರಸಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಮದರಸ ಹಾಗೂ ಚರ್ಚ್‌ಗಳಲ್ಲಿ ಮಕ್ಕಳನ್ನು ದಾಖಲಿಸಿಕೊಂಡು, ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ ಮಕ್ಕಳ ಪೋಷಣೆ & ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಾನೂನು ಕ್ರಮ ತೆಗೆದು ಕೊಳ್ಳಲಾಗುತ್ತದೆ. ಅಂಥ ಸಂಸ್ಥೆಗಳಿಗೆ ಬೀಗ ಬೀಳಲಿದ್ದು, ಅದನ್ನು ನಡೆಸುತ್ತಿರುವವರಿಗೆ ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆಯಿದೆ. ಹೀಗಾಗಿ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಣಿ ಮಾಡುವಂತೆ ಸೂಚನೆ ನೀಡಲಾಗಿದೆ.

ಕೇಂದ್ರ ಮಕ್ಕಳ ಹಕ್ಕುಗಳ ಆಯೋಗ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದು, ನಗರದಲ್ಲಿ ನೋಂದಣಿಯಾಗದ ಮದರಸಗಳು, ಚರ್ಚ್‌ಗಳು ಕಾರ್ಯಾಚರಿಸುತ್ತಿರುವುದನ್ನು ಗುರುತಿಸಿತ್ತು. ಹಲವು ಮದರಸ, ಚರ್ಚ್, ಮಠ, ಎನ್‌ಜಿಒಗಳು ಯಾವುದೇ ಕಾಯಿದೆ ಪ್ರಕಾರ ಗುರುತಿಸಿಕೊಳ್ಳದೆ ಮಕ್ಕಳಿಗೆ ವಸತಿ, ಶಿಕ್ಷಣ ನೀಡುತ್ತಿರುವುದು ಕಂಡುಬಂದಿತ್ತು. ನಗರದಲ್ಲಿ ಅನಧಿಕೃತವಾಗಿ ಮಕ್ಕಳಿಗೆ ವಸತಿ ಕೊಟ್ಟು ಶಿಕ್ಷಣ ನೀಡುತ್ತಿರುವ ಮದರಸಗಳು ಹಾಗೂ ಚರ್ಚ್‌ಗಳ ಬಗ್ಗೆ ಮಾಹಿತಿಯನ್ನೂ ಜಿಲ್ಲಾಡಳಿತಕ್ಕೆ ಆಯೋಗ ನೀಡಿತ್ತು. ಈ ಮಾಹಿತಿಯ ಬೆನ್ನಲ್ಲೇ ನಗರ ಜಿಲ್ಲಾಧಿಕಾರಿಯಿಂದ ನೋಟೀಸ್ ನೀಡಲಾಗಿದೆ.

ನಗರದಲ್ಲಿ ಇದುವರೆಗೂ ಇಂಥ 150ಕ್ಕೂ ಅಧಿಕ ಅನಧಿಕೃತ ಕೇಂದ್ರಗಳು ಪತ್ತೆಯಾಗಿವೆ. ಇವು ತಂದೆ ತಾಯಿ ಇಲ್ಲದ ಮಕ್ಕಳಿಗೆ ವಸತಿ ಕೊಟ್ಟು ಶಿಕ್ಷಣ ನೀಡುತ್ತಿರುವ ಕೇಂದ್ರಗಳಾಗಿವೆ. ಆದರೆ ಸರ್ಕಾರದಿಂದ ಯಾವುದೇ ನೋಂದಣಿಯಾಗದೆ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಅತೀ ಹೆಚ್ಚು ಮದರಸಗಳ ಹೆಸರಲ್ಲೇ ನಡೆಯುತ್ತಿವೆ. ಈ ಬಗ್ಗೆ ಎಲ್ಲಿಯೂ ಕೂಡಾ ನೋಂದಣಿ ಮಾಡಿಲ್ಲ. ನೋಂದಣಿ ಮಾಡದ ಇಂಥ ಕೇಂದ್ರಗಳ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.

ಮುಸ್ಲಿಂ ಅನಾಥಾಶ್ರಮಕ್ಕೆ ಆಯೋಗ ದಾಳಿ
ಇತ್ತೀಚೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (NCPCR) ಅಧ್ಯಕ್ಷರಾಗಿರುವ ಪ್ರಿಯಾಂಕ್‌ ಕನೂಂಗೋ ಅವರು ಬೆಂಗಳೂರಿನ ಅಶ್ವತ್ಥ ನಗರದ ಅಮರಜ್ಯೋತಿ ಲೇಔಟ್‌ನಲ್ಲಿರುವ ಯತೀಂ ಖಾನಾ ನಡೆಸುತ್ತಿರುವ ಹೆಣ್ಮಕ್ಕಳ ಅನಾಥಾಶ್ರಮವೊಂದಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಅವರು ಅಲ್ಲಿರುವ 20 ಹೆಣ್ಮಕ್ಕಳ ಪೈಕಿ ಕೆಲವರನ್ನು ಅಕ್ರಮವಾಗಿ ಕುವೈಟ್‌ಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಶ್ವತ್ಥ ನಗರದಲ್ಲಿರುವ ಈ ಅನಾಥಾಶ್ರಮ ಅಕ್ರಮವಾಗಿದ್ದು, ಇಲ್ಲಿ ಸುಮಾರು 20 ಹೆಣ್ಮಕ್ಕಳನ್ನು ಕೂಡಿ ಹಾಕಲಾಗಿದೆ ಎಂದು ಅಧ್ಯಕ್ಷರು ಆರೋಪಿಸಿದ್ದರು.

ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದಾರೆ. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಅನಾಥಾಶ್ರಮ ನಡೆಸಲು ಇವರಿಗೆ ಯಾವುದೇ ಲೈಸೆನ್ಸ್‌ ಇಲ್ಲ ಎಂದು ಕನೂಂಗೋ ಆರೋಪಿಸಿದ್ದಾರೆ. ಅವರಲ್ಲಿ ಕೆಲವರು ತಂದೆ-ತಾಯಿ ಇಲ್ಲದ ಅನಾಥರಾಗಿದ್ದರೆ, ಕೆಲವರು ಯಾರೂ ರಕ್ಷಕರಿಲ್ಲದೆ ಇಲ್ಲಿಗೆ ಬಂದಿದ್ದಾರೆ. ನಾವು ಅಲ್ಲಿಗೆ ಭೇಟಿ ನೀಡಿದಾಗ ನಮಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡಲು ಅವಕಾಶ ಕೊಟ್ಟಿಲ್ಲ ಎಂದಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement