ದಾವಣಗೆರೆ : ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನಲ್ಲಿ 63700 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಕ್ಷೇತ್ರ ಆವರಿಸಿದ್ದು, ಪ್ರಸ್ತುತ ಭತ್ತದ ಬೆಳೆಯು ಕಟಾವಿನ ಹಂತ ತಲುಪಿದ್ದು ಭತ್ತದ ಕಟಾವು ಪ್ರಾರಂಭವಾಗಿದೆ. ಜಿಲ್ಲೆಯ ಬಹುತೇಕ ರೈತರು ಭತ್ತ ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದಾರೆ. ರೈತರು ತಮ್ಮ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಭತ್ತ ಕಟಾವು ಯಂತ್ರಗಳ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದ್ದಾರೆ.
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ಚೈನ್ ಅಥವಾ ಬೆಲ್ಟ್ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ರೂ.2600 ಹಾಗೂ ಟೈರ್ ಮಾದರಿಯ ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ ರೂ.1900 ನಿಗದಿಪಡಿಸಲಾಗಿದೆ. ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಹೆಚ್ಚಿನ ದರ ಪಡೆದಲ್ಲಿ ಮಾಲೀಕರ ವಿರುದ್ದ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಭತ್ತ ಕಟಾವು ಯಂತ್ರದ ಮಾಲೀಕರು ಹೆಚ್ಚಿನ ದರ ನಿಗದಿಪಡಿಸಿದಲ್ಲಿ ರೈತರು ಕಂದಾಯ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ






























