ಮೂಡಾ ಹಗರಣ ಹಿನ್ನೆಲೆ ಸಿಎಂ ವಿರುದ್ಧ ಲೋಕಾಯುಕ್ತ, ಮಾನವ ಹಕ್ಕು ಆಯೋಗಕ್ಕೆ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಮೂಡಾದಿಂದ ಜಮೀನು ಹಂಚಿಕೆ ವಿಚಾರದಲ್ಲಿ ವಂಚನೆಯಾಗಿರುವುದಾಗಿ ಕರ್ನಾಟಕ ಕಾರ್ಮಿಕರ ಕಲ್ಯಾಣ ಪ್ರತಿಷ್ಠಾನದ ಪದಾದಿಕಾರಿಗಳು ಸಿ.ಎಂ.ಸಿದ್ದರಾಮಯ್ಯ ಹಾಗೂ ಮೂಡಾ ಕಮಿಷನರ್ ವಿರುದ್ಧ ದೂರು ಸಲ್ಲಿಸಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಬಿ.ಎಸ್ ಕೃಷ್ಣಮೂರ್ತಿ ಅವರ 2 ಎಕರೆ ಜಾಗವನ್ನು ಕೆಐಎಡಿಬಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ/ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಅದರ ಬದಲಾಗಿ ಕೇವಲ 1780 ಚದರ ಮೀಟರ್ ಜಾಗ ನೀಡಲಾಗಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು ವಿಜಯನಗರದಲ್ಲಿ ಬದಲಿ ಭೂಮಿ ಕೊಡಲಾಗಿದೆ. 1998ರಲ್ಲಿ ವಶಪಡಿಸಿಕೊಂಡ ಆ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50ರ ಅನುಪಾತದ ನಿಯಮಾನುಸಾರ ಜಮೀನು ನೀಡಿದ್ದಾರೆ. ಆದರೆ ಬಿ.ಎಸ್.ಕೃಷ್ಣಮೂರ್ತಿ ಅವರ 2 ಎಕರೆ ಜಾಗವನ್ನ ವಶಕ್ಕೆ ಪಡೆದು ಕೇವಲ 1780 ಚದರ ಮೀಟರ್ ಜಾಗ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಇನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿದ್ದ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆ ಜಾಗವನ್ನು ಸಿದ್ದರಾಮಯ್ಯ ಪತ್ನಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಆದರೆ ಆ ಜಾಗ ದಲಿತರಿಗೆ ಸೇರಿದ್ದಾಗಿದ್ದು, ಅದನ್ನ‌ ಕಬಳಿಸಲಾಗಿದೆ ಮತ್ತು ನಂತರ ಅದನ್ನ ದಾನದ ಮೂಲಕ ಪಾರ್ವತಿಯವರಿಗೆ ಕೊಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ತನಿಖೆ ಮಾಡುವಂತೆ ಲೋಕಾಯುಕ್ತಗೆ ದೂರು ನೀಡಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement