ಮೈಸೂರಿನ ಕಲ್ಲು ಚಿತ್ರದುರ್ಗದಲ್ಲಿ ಅರಳಿ ಶಿಲ್ಪವಾಗುತ್ತಿದೆ: ಡಾ ಎಚ್ ಕೆ ಎಸ್ ಸ್ವಾಮಿ.

 

ಚಿತ್ರದುರ್ಗ;- ಮೈಸೂರಿನ ಸುತ್ತಮುತ್ತ ಸಿಗುವ ಕೃಷ್ಣಶಿಲೆ ಎಂಬ ಕಲ್ಲನ್ನು ಚಿತ್ರದುರ್ಗಕ್ಕೆ ತಂದು, ಅದರಲ್ಲಿ  ವೈವಿಧ್ಯಮಯವಾದ ಕಲೆಗಳನ್ನ, ಶಿಲ್ಪಗಳನ್ನ ಕೆತ್ತನೆ ಮಾಡಿ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಸಾರ್ವಜನಿಕರಿಗೆ ಉಣಬಡಿಸುತ್ತಿರುವ ಶಿಲ್ಪಿ ಶಿವಕುಮಾರ್ ರವರು ಎಲ್ಲಾ ಯುವ ಜನಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

ನಿರುದ್ಯೋಗ ಸಮಸ್ಯೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರು ಶಿಲ್ಪಕಲೆಯನ್ನು ಸಹ ಒಂದು ಉದ್ಯೋಗವನ್ನಾಗಿ ಅಳವಡಿಸಿಕೊಂಡು, ಜೀವನವನ್ನು ನಿರ್ವಹಿಸಿಕೊಳ್ಳಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್. ಕೆ. ಎಸ್. ಸ್ವಾಮಿ ನಿವೇದಿಸಿಕೊಂಡಿದ್ದಾರೆ.

Advertisement

ಪ್ರತಿ ಕಲ್ಲನ್ನು ಶಿಲ್ಪವನ್ನಾಗಿ ರೂಪಿಸಲು ಸಾಧ್ಯವಾಗುವುದಿಲ್ಲ, ಕೆಲವೊಂದು ವಿಶಿಷ್ಟವಾದ ಕಲ್ಲುಗಳು, ಎಲ್ಲಾ ಉಷ್ಣ, ಶೀತ, ಬಿಸಿಲನ್ನ ಸಹಿಸಿಕೊಂಡು, ಯಾವುದೇ ವಿಕಾರವನ್ನು ಹೊಂದದಂತಹ ಕಲ್ಲುಗಳನ್ನೇ ಬಳಕೆ ಮಾಡಿ, ಶಿಲ್ಪಗಳನ್ನು ಕೆತ್ತಬೇಕಾಗುತ್ತದೆ.

ಅಂತಹ ಕಲ್ಲುಗಳು ಭೂಮಿಯ ಹೊರಗಿಗಿಂತ, ಮೇಲ್ಭಾಗಕ್ಕಿಂತ, ಭೂಮಿಯ ಕೆಳಭಾಗದಲ್ಲಿ ದೊರೆಯುತ್ತವೆ. ಅವುಗಳನ್ನು  ಹೊರ ತೆಗೆದು ನಿರ್ದಿಷ್ಟವಾದ ಗಾತ್ರಕ್ಕೆ ಕತ್ತರಿಸಿ, ಅವುಗಳನ್ನು ಸಾಗಾಣಿಕೆ ಮಾಡಿ ತಂದು, ಅವುಗಳನ್ನು ಕೆತ್ತನೆ ಮಾಡಿ, ಅದಕ್ಕೊಂದು ರೂಪ ಕೊಟ್ಟಾಗ, ಅದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಹಾಗೂ ಜನರ ಭಾವನೆಗಳನ್ನು ಬದಲಾಯಿಸಲು ಸಹಕಾರಿಯಾಗುತ್ತದೆ ಎಂದರು.

ಶಿಲ್ಪಕಲೆಯಲ್ಲಿ ನಮ್ಮ ನಾಡು ಜಗದ್ವಿಖ್ಯಾತಿ ಪಡೆದಿದ್ದನ್ನ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಅಂತಹ ಗುಡಿ ಕೈಗಾರಿಕೆಯ ಕೌಶಲ್ಯವಾದಂತ ಶಿಲ್ಪಕಲೆಯನ್ನ ಈಗಲೂ ಸಹ ಕೆಲ ಯುವಕರು, ಜೀವನದಲ್ಲಿ ಅಳವಡಿಸಿಕೊಂಡು ಅದರ ಮೇಲೆ ಬದುಕನ್ನ ಸಾಗಿಸುತ್ತಿದ್ದಾರೆ. ಅಂತವರಿಗೆ ಸರ್ಕಾರ, ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಿ, ಅವರನ್ನ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ, ಅವರಿಂದ ಇನ್ನೊಂದು ಜನಾಂಗದವರಿಗೆ ತರಬೇತಿಯನ್ನು ನೀಡಿ, ಇಂತಹ ಕಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಒಂದು ಕ್ವಿಂಟಾಲಿಗೆ 8000 ದಷ್ಟು ಬೆಲೆ ಬಾಳುವ ಈ ಕಲ್ಲುಗಳನ್ನು, ಮೈಸೂರಿನ ಸುತ್ತಮುತ್ತಲಿರುವ 50 ರಿಂದ 60 ಕಿಲೋಮೀಟರ್ ವಿಸ್ತೀರ್ಣದಲ್ಲಿ ದೊರೆಯುವ ಈ ಕಲ್ಲುಗಳನ್ನ ಕೆಲವೊಮ್ಮೆ ಭೂಮಿ ಹಗೆಯುವಾಗ, ರೈತರ ಜಮೀನಿನಲ್ಲಿ ಅಥವಾ ಗಣಿಕೈಗಾರಿಕೆಯಲ್ಲಿ ಕೆಳಮಟ್ಟದ ನೆಲಬಗೆಯುವಾಗ, ಜೆಸಿಬಿಯಿಂದ ಮಣ್ಣು ತೆಗೆಯುವಾಗ, ಈ ತರಹದ ಕಲ್ಲುಗಳು ದೊರಕುತ್ತವೆ.

ಇವುಗಳು ಯಾವುದೇ ಉಷ್ಣ, ಶೀತ, ಬಿಸಿಲಿಗೆ ಕುಗ್ಗದೆ, ಜಗ್ಗದೆ, ಬಲಿಷ್ಠವಾಗಿ ನಿಲ್ಲುವದರಿಂದ, ಇಂತಹ ಕೃಷ್ಣ ಶಿಲೆಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ,  ಬೇರೆ ಕಲ್ಲುಗಳಾದರೆ ಕೆತ್ತನೆ ಆದ ಮೇಲೆ ವಿಕಾರ ಹೊಂದುವ ಸಂದರ್ಭವಿರುತ್ತದೆ. ಇಂತಹ ಕಲ್ಲುಗಳು ನಮ್ಮ ರಾಜ್ಯದಲ್ಲಿ ದೊರೆಯುತ್ತಿರುವುದು ನಮ್ಮ ಪುಣ್ಯ ಎಂದರು.

ಬಹಳಷ್ಟು ಯುವಕರು ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿರುತ್ತಾರೆ, ಅಂತವರಿಗೆ ಶಿಲ್ಪಕಲೆಯ ಬಗ್ಗೆನೂ ಸಹ ತರಬೇತಿ ನೀಡಿದರೆ, ಅತ್ಯುತ್ತಮ ಶಿಲ್ಪಗಾರರಾಗುತ್ತಾರೆ. ಅಂತ ಶಿಲ್ಪಕಾರರು ರಚಿಸಿದಂತಹ ಅಯೋಧ್ಯ ರಾಮಮಂದಿರ, ರಾಮ ವಿಗ್ರಹಗಳು, ಇಂದು ಪ್ರಪಂಚದಾದ್ಯಂತ ಅಭಿಮಾನಿಗಳನ್ನ, ಭಕ್ತಾದಿಗಳನ್ನ ಹೊಂದಿದೆ, ಕೋಟ್ಯಾಂತರ ಜನ ವೀಕ್ಷಣೆ ಮಾಡಿದಾಗ, ಶಿಲ್ಪ ಕೆತ್ತನೆ ಮಾಡಿದವರಿಗೆ ಆತ್ಮತೃಪ್ತಿ ಮತ್ತು ಅಭಿಮಾನ ಮೂಡುತ್ತದೆ.

ತಮ್ಮ ಕೆಲಸದ ಮೇಲೆ ತಮ್ಮ ನಂಬಿಕೆ ಹೆಚ್ಚಾಗಿ, ತಮ್ಮ ಕೈಕಾಲುಗಳನ್ನೇ ನಂಬಿ ಕೆತ್ತನೆ ಕೆಲಸ ಮಾಡಿದಂತವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಹಾಗಾಗಿ ಇಂತಹ ಕಲೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಬೇಕಾಗಿದೆ. ಇವರಿಗೂ ಸಹ ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆಗಳಿಂದಾಗಿ, ಆರೋಗ್ಯದ ಸಮಸ್ಯೆಗಳಿಂದಾಗಿ, ಕೌಟುಂಬಿಕ ನಿರ್ವಹಣೆ ಕಷ್ಟಕರವಾಗಿರುತ್ತದೆ. ಅಂತವರಿಗೆ ಸರ್ಕಾರ ಸಹಾಯಧನಗಳ ಮುಖಾಂತರ ಪ್ರೋತ್ಸಾಹಿಸಿ, ಸಂಘ ಸಂಸ್ಥೆಗಳು ಸಹ ಇವರನ್ನ ಗುರುತಿಸಿ, ಗೌರವಿಸಿ, ಹೆಚ್ಚಿನ ಮಟ್ಟದ ಸೌಲಭ್ಯಗಳನ್ನು ಒದಗಿಸಿ ಕೊಟ್ಟಾಗ ಮಾತ್ರ ಈ ಶಿಲ್ಪಕಲೆ ಪ್ರತಿಯೊಂದು ಊರಿನಲ್ಲೂ ಸಹ ಉಳಿದುಕೊಳ್ಳುತ್ತದೆ ಎಂದರು.

ಸಾಕಷ್ಟು ಶಾಲಾ ಮಕ್ಕಳನ್ನು ಇಂಥ ಶಿಲ್ಪಕಲಾ ಕೇಂದ್ರಗಳಿಗೆ ಕರೆದುಕೊಂಡು ಹೋಗಿ, ಅವುಗಳನ್ನು  ಪರಿಚಯಿಸಿ ಕೊಡುವುದು ಉತ್ತಮ. ಅವರು ಬಳಕೆ ಮಾಡುವ ಆಯುಧಗಳು, ಸಲಕರಣೆಗಳು, ಕೆತ್ತನೆ ಮಾಡುವ ರೀತಿ, ಅದರಲ್ಲಿರುವ ವೈಜ್ಞಾನಿಕ ಕೌಶಲ್ಯ, ಕಲ್ಲನ್ನು ಕತ್ತರಿಸುವಂತಹ ಆಯುಧಗಳು, ಹಾಗೂ ಸುಲಭ ಉಪಾಯಗಳನ್ನ ಅವರು ಕಂಡುಕೊಂಡಿರುವ ರೀತಿ, ಕೆತ್ತನೆ ಮಾಡುವಾಗ ಏಕಾಗ್ರತೆ ಮತ್ತು ತಮ್ಮ ಸಲಕರಣೆಗಳ ಬಗ್ಗೆ ನಿಯಂತ್ರಣ, ಸೂಕ್ಷ್ಮವಾಗಿ ಚಿತ್ರಿಕರಣವನ್ನು ಮನಸ್ಸಿನಲ್ಲಿ ಚಿತ್ರೀಕರಿಸಿಕೊಂಡು, ಕಲ್ಲಿನ ಮೇಲೆ ಚಿತ್ರಕರಿಸುವಂತಹ ಕೌಶಲ್ಯ ಅಭಿವೃದ್ಧಿಯನ್ನು, ಮಕ್ಕಳಿಗೆ ತೋರಿಸಿದರೆ, ಕೆಲವೊಂದಿಷ್ಟು ಮಕ್ಕಳಾದರೂ ಈ ಕೌಶಲ್ಯವನ್ನು ಕಲಿತುಕೊಂಡು, ಮುಂದಿನ ಪೀಳಿಗೆಗೆ ಈ ಕಲೆಯನ್ನು ಹಸ್ತಾಂತರಿಸಬಹುದು ಎಂದು ಆಶಯದ ನುಡಿಗಳನ್ನಾಡಿದ್ದಾರೆ.

ಗಣಿಗೈಗಾರಿಕೆಯಲ್ಲಿ ದೊರಕುವ ಕಲ್ಲುಗಳಿಗೂ, ನೆಲದ ಆಳದಲ್ಲಿ ಸಿಗುವ ಕಲ್ಲುಗಳಿಗೂ ಬಹಳ ವ್ಯತ್ಯಾಸ ಉಂಟು, ಇಂತಹ ಕಲ್ಲುಗಳನ್ನು ಗುರುತಿಸಿ, ಇಂತಹ ಕಲೆಗಾರರಿಗೆ ಕಡಿಮೆ ವೆಚ್ಚದಲ್ಲಿ ಒದಗಿಸಿದರೆ, ಸಾಕಷ್ಟ ಶಿಲ್ಪ ಕಲೆಗಳು ಅರಳಿ, ರಾಜ್ಯದ ಕೀರ್ತಿಯನ್ನ ಹರಡಲು ಸಹಕಾರಿಯಾಗುತ್ತದೆ.

ಬಹಳಷ್ಟು ದೇವಸ್ಥಾನಗಳಲ್ಲಿ, ವಿಗ್ರಹಗಳಲ್ಲಿ ಮಹಾನ್ ನಾಯಕರುಗಳ ವಿಗ್ರಹಗಳನ್ನ, ಕಲ್ಲಿನಲ್ಲೇ ಕೆತ್ತಿ, ಹೂವಿನಂತೆ ಅರಳಿಸುವ ಇವರ ಕೌಶಲ್ಯವನ್ನು ನೋಡಿದವರಿಗೆ ಆಶ್ಚರ್ಯವಾಗುತ್ತದೆ.  ಇಂತಹ ಕಲೆಯನ್ನು ನಾವು ಉಳಿಸಿ ಬೆಳೆಸಿಕೊಳ್ಳಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement