ನವದೆಹಲಿ: ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾದಕ ವ್ಯಸನಕ್ಕೆ ಒಳಗಾಗಿದ್ದಾರೆ. ಅವರು ಸಂಸತ್ತಿನಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ಮಾಡುತ್ತಾರೆ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಚಕ್ರವ್ಯೂಹ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕಂಗನಾ ಅವರು, ‘ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಡುವ ಮಾತುಗಳನ್ನು ನೋಡಿದರೆ, ಅವರು ಯಾವಾಗಲೂ ಕುಡಿದಿದ್ದಾರೆ ಎಂದು ತೋರುತ್ತದೆ. ಡ್ರಗ್ಸ್ ಸೇವಿನೆ ಮಾಡುತ್ತಾರೆ ಎಂಬ ಸಂಶಯ ಇದೆ. ಆದ್ದರಿಂದ ಅವರನ್ನೊಮ್ಮೆ ಪರೀಕ್ಷಿಸಬೇಕು’ ಎಂದು ಹೇಳಿದರು. ರಾಹುಲ್ ಗಾಂಧಿ ಅವರು ಅಭಿಮನ್ಯುವಿನ ಚಕ್ರವ್ಯೂಹ ಮತ್ತು ಮಹಾಭಾರತ ಯುದ್ಧದಲ್ಲಿ ಅವರ ಹತ್ಯೆಯನ್ನ ಉಲ್ಲೇಖಿಸಿದ್ದರು. ಕರ್ಣ, ದ್ರೋಣಾಚಾರ್ಯ, ದುಶಾಸನ, ಅಶ್ವತ್ಥಾಮ, ಕೃಪಾ, ಶಕುನಿ, ದುರ್ಯೋಧನ ಒಟ್ಟಾಗಿ ಅಭಿಮನ್ಯುವನ್ನು ಕೊಂದರು. ಇಂದಿಗೂ, ಆರು ಜನರು ದೇಶವನ್ನು ತಮ್ಮ ಗೊಂದಲದಲ್ಲಿ ಸಿಲುಕಿಸಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್, ಮೋಹನ್ ಭಾಗವತ್, ಅಂಬಾನಿ ಮತ್ತು ಅದಾನಿ ಈ ಆರು ಜನರು ಎಂದು ಹೇಳಿದ್ದರು.
