ವರದಕ್ಷಿಣೆ ಕಿರುಕುಳ: ಪತಿ, ಅತ್ತೆ, ಮಾವನಿಗೆ 15 ವರ್ಷ ಜೈಲು ಶಿಕ್ಷೆ

ತುಮಕೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣರಾಗಿದ್ದ ಪತಿ ಅತ್ತೆ ಹಾಗು ಮಾವನಿಗೆ 15 ವರ್ಷ ಕಾರಾಗೃಹ ಶಿಕ್ಷೆ ಹಾಗು ದಂಡ ವಿಧಿಸಿ ತಿಪಟೂರು 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಹಂದನಕೆರೆ ಹೋಬಳಿಯ ಓಟಿಕೆರೆ ಗ್ರಾಮದ ನಿವಾಸಿ ಗಿರೀಶ್‌ ಆತನ ತಾಯಿ ರೇಣುಕಮ್ಮ ತಂದೆ ಹನುಮಂತಯ್ಯ ಶಿಕ್ಷೆಗೆ ಗುರಿಯಾದವರು. ಭದ್ರಾವತಿ ಟೌನ್‌ ನಿವಾಸಿ ಲಕ್ಷ್ಮೀ ಮೃತಪಟ್ಟ ಮಹಿಳೆ. ಗಿರೀಶ್ ಮತ್ತು ಲಕ್ಷ್ಮೀ ಎಂಬುವವರ ವಿವಾಹ 2017 ಮೇ 29 ರಂದು ನೆರವೇರಿತ್ತು. ಮದುವೆಯಾಗಿ ಕೆಲವು ದಿನದ ನಂತರ ಗಿರೀಶ್ ಲಕ್ಷ್ಮೀ ಯೊಂದಿಗೆ ನೀನು ವರದಕ್ಷಿಣೆ ತರಲಿಲ್ಲ, ನಿನ್ನ ಬಿಟ್ಟು ಬೇರೆಯವರನ್ನು ವಿವಾಹವಾಗಿದ್ದರೆ ಹೆಚ್ಚು ವರದಕ್ಷಿಣೆ ಸಿಗುತ್ತಿತ್ತು ಎಂದು ಜಗಳವಾಡುತ್ತಿದ್ದ ರಿಂದ ಮೃತಳ ತಂದೆ ತಾಯಿ ಮಗಳಿಗೆ 10 ಗ್ರಾಂ ಚಿನ್ನದ ಓಲೆ ಜುಮುಕಿ, ಮಗುವಿಗೆ 5 ಗ್ರಾಂ ಚಿನ್ನದ ಓತಿ ಹಾಗು ಅಳಿಯನಿಗೆ ಬೈಕ್ ಖರೀದಿಸಲು ಸಂಘದಿಂದ ಸಾಲ ಪಡೆದು 10 ಸಾವಿರ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಗಿರೀಶ್ ವರದಕ್ಷಿಣೆಗಾಗಿ ಪೀಡಿಸಿ ಲಕ್ಷ್ಮೀ ಅವರಿಗೆ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಇದೇ ನೆಪದಲ್ಲಿ 2019 ರ ಮೇ 25 ರಂದು ಗಿರೀಶ್ ತನ್ನ ಹೆಂಡತಿ ಲಕ್ಷ್ಮೀಯವರೊಂದಿಗೆ ಗಲಾಟೆ ಮಾಡಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ಲಕ್ಷ್ಮೀ ನೇಣಿಗೆ ಕೊರಳೊಡ್ಡಿದ್ದಳು. ಈ ಸಂಬಂಧ ಲಕ್ಷ್ಮೀ ಸಂಬಂಧಿಕರು ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಗಿರೀಶ್ ಹೆಚ್ಚಿನ ವರದಕ್ಷಿಣೆ ತರುವಂತೆ ಲಕ್ಷ್ಮೀ ಗೆ ಕಿರುಕುಳ ನೀಡುತ್ತಿದ್ದ. ಇದಲ್ಲದೆ ಅವರ ಕುಟುಂಬದವರು ನಿಂದನೆ ಮಾಡಿದ್ದಾರೆ. ಈ ಕಾರಣಕ್ಕೆ ಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು. ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 498(ಎ) 304 (ಬಿ) ಹಾಗು ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಹಾಗು 4 ರ ಅಡಿ ದೂರು ದಾಖಲಿಸಿಕೊಂಡು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಸೂಕ್ಷ್ಮವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ ಪುಷ್ಪಾವತಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಬಿ.ಕೆ. ನಾಗರತ್ನಮ್ಮ ವಾದಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement