ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ 200ಕ್ಕೂ ಹೆಚ್ಚು ಮರಗಳನ್ನ ಕಡಿಯಬೇಡಿ, ಪರಿಸರಕ್ಕಾಗಿ, ಮುಂದಿನ ಜನಾಂಗಕ್ಕಾಗಿ ಅವುಗಳನ್ನ ಉಳಿಸಿಕೊಳ್ಳಿ, ಕಟ್ಟಡ ನಿರ್ಮಾಣವನ್ನ ಖಾಲಿ ಜಾಗದಲ್ಲಿ ಮಾಡಿ ಎಂದು ಶಾಲಾ ಮಕ್ಕಳು ಸಹ ಮರಗಳನ್ನ ಅಪ್ಪಿಕೊಂಡು, ಆತಂಕದಿಂದ ಪರಿಸರ ಉಳಿಸಿ ಎಂದು ಘೋಷಣೆ ಕೂಗಿದಂತಹ ಸಂದರ್ಭವನ್ನ ಜಿಲ್ಲಾಡಳಿತ, ಜಿಲ್ಲಾ ಜನಪ್ರತಿನಿಧಿಗಳು, ಕಾಲೇಜು ಶಿಕ್ಷಣ ಇಲಾಖೆ, ನಾಗರೀಕರು, ಅರ್ಥ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ, ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಕರೆ ನೀಡಿದರು.
ಅವರು ಚಿತ್ರದುರ್ಗ ನಗರದ ಕೇಂದ್ರ ಭಾಗದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ಮರಗಳನ್ನ ಉಳಿಸುವ ನಿಟ್ಟಿನಲ್ಲಿ, ಶಾಲಾ ಮಕ್ಕಳು ಹಮ್ಮಿಕೊಂಡಿದ್ದ ಅಪ್ಪಿಕೋ ಚಳುವಳಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಚಿತ್ರದುರ್ಗ ಬಯಲು ಸೀಮೆ ಪ್ರದೇಶವಾಗಿದ್ದು ಮರಗಳು ಕಡಿಮೆ ಸಂಖ್ಯೆಯಲ್ಲಿದ್ದು ವಾತಾವರಣ ಬಿಸಿಯಾಗುತ್ತಿದ್ದು, ದಿನೇ ದಿನೇ ಬರಗಾಲ ಪೀಡಿತ ಪ್ರದೇಶವಾಗಲು ಹೆಜ್ಜೆ ಇಡುತ್ತಿರುವ ಈ ಜಿಲ್ಲೆಯನ್ನ, ಮರಗಳಿಂದ ರಕ್ಷಿಸಿಕೊಳ್ಳಬೇಕಾಗಿದೆ, ಕಟ್ಟಡ ನಿರ್ಮಾಣ ಮಾಡಿ ಹೊಸ ಹೊಸ ಕಾಲೇಜುಗಳನ್ನ ಮರಗಳಿರುವ ಜಾಗದಲ್ಲಿ ನಿರ್ಮಾಣ ಮಾಡುವುದು ಪರಿಸರ ವಿರೋಧಿಯಾಗಿದೆ ಎಂದರು.
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ 20 ವರ್ಷದ ಅಮೂಲ್ಯವಾದಂತ 200 ಜಾತಿಯ ಮರಗಳಿದ್ದು, ಅವುಗಳನ್ನ ಮಹಿಳಾ ಕಾಲೇಜು ನಿರ್ಮಾಣಕ್ಕಾಗಿ ನಾಶ ಮಾಡುವುದು ಮುಂದಿನ ಜನಾಂಗಕ್ಕೆ ಗಂಡಾಂತಕಾರಿಯಾಗುತ್ತದೆ. ಹಾಗಾಗಿ ಚಿತ್ರದುರ್ಗದ ನಾಗರಿಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಮರ ಉಳಿಸುವ ನಿಟ್ಟಿನಲ್ಲಿ ಹೋರಾಟಗಳಲ್ಲಿ ಕೈಜೋಡಿಸಬೇಕು, ಸಣ್ಣ ಸಣ್ಣ ಮಕ್ಕಳು ಶಾಲೆಗಳನ್ನ ಬಿಟ್ಟು, ಮರಗಳನ್ನ ತಬ್ಬಿಕೊಂಡು, ಪರಿಸರ ಸಂರಕ್ಷಣೆಗಾಗಿ ಹೋರಾಟ ಮಾಡುವುದನ್ನು ಹಿರಿಯರು ಅರ್ಥ ಮಾಡಿಕೊಳ್ಳಬೇಕು ಎಂದರು.
ಹಿರಿಯ ನಾಗರೀಕರಿಗೆ ಮರ ಮತ್ತು ಪರಿಸರದ ಅವಶ್ಯಕತೆ ಇಲ್ಲದೆ ಬರಿ ಹಣದ ಚಿಂತೆಯಾಗಿದೆ ,ಆದರೆ ಶಾಲಾ ಮಕ್ಕಳಿಗೆ ತಮ್ಮ ಮುಂದಿನ ಭವಿಷ್ಯಕ್ಕಾಗಿ,ಆಟವಾಡಲು ಕುಳಿತು ಓದಲ, ನೆರಳಿರುವಂತಹ ಪ್ರದೇಶ, ಅರಣ್ಯ ಪ್ರದೇಶ ಬೇಕಾಗುತ್ತದೆ, ನಗರದ ಮಧ್ಯೆ ಇರುವ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿರುವ ಮರಗಳು ಮಕ್ಕಳಿಗೆ ಕುಳಿತು ಓದಲು ಅನುಕೂಲಕರವಾಗಿದೆ, ಬಹಳಷ್ಟು ಜನ ಕಷ್ಟಪಟ್ಟು 20 ವರ್ಷಗಳಿಂದ ಮರಗಳ ನೆಟ್ಟುಕೊಂಡು, ಸಾಕಿ ಸಂಭಾಳಿಸಿರುವ ಮರಗಳನ್ನ ಅಧಿಕಾರಿಗಳು ಒಂದೇ ನಿಮಿಷದಲ್ಲಿ ಕಡಿದು ಬಿಸಾಕುವುದು ಅಮಾನೀಯವಾಗಿದೆ, ಹಾಗಾಗಿ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿರುವ ಮರಗಳನ್ನು ಉಳಿಸಿಕೊಂಡು, ಕಟ್ಟಡಗಳನ್ನ ಖಾಲಿ ಇರುವ ಜಾಗದಲ್ಲಿ ನಿರ್ಮಿಸಿಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮುಖಾಂತರ ಒತ್ತಾಯಿಸಿದ್ದಾರೆ.
ಡಿ ಸಿ ಕಛೇರಿ ನಿರ್ಮಾಣ ನೆಪದಲ್ಲಿ 2500 ಮರಗಳನ್ನ ನಾಶ ಮಾಡುತ್ತಿರುವುದು ಸಹ ನ್ಯಾಯಕರವಾಗಿದೆ, ಇದರ ವಿರುದ್ಧ ಪ್ರತಿ ಶಾಲೆಯ ವಿದ್ಯಾರ್ಥಿಗಳು ಮರ ಅಪ್ಪಿಕೋ ಚಳುವಳಿನಲ್ಲಿ ಭಾಗವಹಿಸಿ, ಚಿತ್ರದುರ್ಗದಲ್ಲಿ ಮರ ಉಳಿಸಿಕೊಳ್ಳುವ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ವಿನಂತಿಸಿಕೊಂಡಿದ್ದಾರೆ.































