‘ಸರ್ಕಾರದ ಹಗರಣಗಳನ್ನ ಸಿಎಂ ಮುಚ್ಚಿ ಹಾಕಲು ನಿಂತಿದ್ದಾರೆ’- ಬಿ.ವೈ ವಿಜಯೇಂದ್ರ

ಬಳ್ಳಾರಿ: ಸರ್ಕಾರದ ಹಗರಣಗಳನ್ನ ಸಿಎಂ ಸಿದ್ದರಾಮಯ್ಯ ಅವರು ಮುಚ್ಚಿ ಹಾಕಲು ನಿಂತಿದ್ದಾರೆ. ನಾಗೇಂದ್ರ, ದದ್ದಲ್ ಗೆ ಹಗರಣದ ಎಸ್‌ಐಟಿ ತನಿಖೆಗೆ ನೋಟೀಸ್ ನೀಡಲಿಲ್ಲ. ಇಡಿ ತನಿಖೆಗೆ ಎಂಟ್ರಿ ಆದ ಬಳಿಕ ಅದರ ಕಾವು ಸಿಎಂಗೆ ಗೊತ್ತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳೇ ಹಗರಣ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾಗಾದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರಿಗೆ ರಾಜೀನಾಮೆ ನೀಡಲು ಸಿಎಂ ಹೇಳಿದ್ದೇಕೆ? ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಹಾಗೂ ಬಸನಗೌಡ ದದ್ದಲ್ ರನ್ನು ಸಿಎಂ ಹಾಗೂ ಡಿಸಿಎಂ ರಕ್ಷಿಸುತ್ತಿದ್ದಾರೆ ಎಂದರು.

ನಿಯಮವನ್ನು ಗಾಳಿಗೆ ತೋರಿಸಿ ಸಿಎಂ ಕುಟುಂಬಸ್ಥರು ನಿವೇಶನ ಪಡೆದಿದ್ದಾರೆ. ಹಗರಣವನ್ನು ಬೆಳಕಿಗೆ ತಂದ ಆರ್ ಟಿಐ ಕಾರ್ಯಕರ್ತರನ್ನು ಜೈಲಿಗೆ ಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಆಶ್ಚರ್ಯ ಪಡುವಂತಾಗಿದೆ. ಅಷ್ಟು ಹಗರಣಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಹಿಂದ ಸಿಎಂ ಆಗಿರುವುದನ್ನು ಸಹಿಸದೇ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಸೋಮವಾರದ ನಂತರ ಸದನದಲ್ಲಿ ಮುಡಾ ಹಗರಣದ ಕುರಿತು ಚರ್ಚಿಸುತ್ತೇವೆ ಎಂದು ತಿಳಿಸಿದರು.

Advertisement

ಮಾಜಿ ಸಚಿವ ನಾಗೇಂದ್ರ ಅವರು ಬಾಯಿ ಬಿಟ್ಟರೆ ಹಗರಣಗಳ ಮೂಲ ಸಿಎಂ ಹಾಗೂ ಡಿಸಿಎಂ ಬುಡಕ್ಕೆ ಬರುತ್ತದೆ. ಸದನದ ನಡುವೆಯೂ ಪತ್ರಿಕಾಗೋಷ್ಠಿ ಮಾಡಿ ತಮ್ಮನ್ನು ತಾವೇ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಈ ಹಗರಣಕ್ಕೂ ಹಣಕಾಸಿನ ಇಲಾಖೆ ಸಂಬಂಧವಿಲ್ಲ ಎಂದು ಅವರು ಹೇಳುತ್ತಾರೆ. ಸಂಬಂಧ ಇದೆ ಅಂದರೆ ಸಿಎಂ ಬುಡಕ್ಕೇ ಬರುತ್ತದೆ. ಯಾವುದೇ ರಾಜ್ಯದ ಸಿಎಂ ಅಸಮರ್ಥ ಇದ್ದರೆ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement