ರಾಜಸ್ಥಾನ : ಭಾರತದಲ್ಲಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿ ಪರೀಕ್ಷೆಯೂ ಒಂದು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಹಲವಾರು ಯುಪಿಎಸ್ಸಿ ಅಭ್ಯರ್ಥಿಗಳ ಕನಸಾಗಿರುತ್ತದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಎಲ್ಲರೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಹೀಗೆ ತನ್ನ ಕಠಿಣ ಪರಿಶ್ರಮದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಪರಿ ಬಿಷ್ಣೋಯ್ ಅವರ ಯಶೋಗಾಥೆ ಇದು.
ಪರಿ ಬಿಷ್ಣೋಯ್ ಅವರು ರಾಜಸ್ಥಾನದ ಕಾಕ್ರಾ ಗ್ರಾಮದಲ್ಲಿ ಜನಿಸಿದರು. ಪರಿ ಅವರ ತಂದೆ ಮಣಿರಾಮ್ ಬಿಷ್ಣೋಯ್ ವಕೀಲರಾಗಿದ್ದರೆ, ತಾಯಿ ಸುಶೀಲಾ ಬಿಷ್ಣೋಯ್ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪರಿ ಅವರ ಅಜ್ಜ ಗೋಪಿರಾಮ್ ಬಿಷ್ಣೋಯ್ ಕೂಡ ಕಾಕ್ರಾ ಗ್ರಾಮದ ನಾಲ್ಕು ಬಾರಿ ಸರಪಂಚರಾಗಿ ಸೇವೆ ಸಲ್ಲಿಸಿದ್ದರು.
ಪರಿ ತಮ್ಮ ಶಾಲಾ ಶಿಕ್ಷಣವನ್ನು ಅಜ್ಮೀರ್ನ ಪ್ರತಿಷ್ಠಿತ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಪೂರ್ಣಗೊಳಿಸಿದರು. 12ನೇ ತರಗತಿಯ ನಂತರ ದೆಹಲಿಗೆ ತೆರಳಿದ ಅವರು, ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜ್ ಫಾರ್ ವುಮೆನ್ನಲ್ಲಿ ಪದವಿ ಪಡೆದರು. ಬಳಿಕ ಅವರು ಅಜ್ಮೀರ್ನ ಮಹರ್ಷಿ ದಯಾನಂದ ಸರಸ್ವತಿ ವಿಶ್ವವಿದ್ಯಾಲಯದಿಂದ ರಾಜಕೀಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಯುಜಿಸಿ ನೆಟ್ ಪರೀಕ್ಷೆಯನ್ನೂ ಪಾಸ್ ಮಾಡಿದ ಪರಿ, ಎನ್ಇಟಿ-ಜೆಆರ್ಎಫ್ ಕೂಡ ಉತ್ತೀರ್ಣರಾದರು. ಇದರ ಜೊತೆಗೇ ಅವರು ಯುಪಿಎಸ್ಸಿ ಪರೀಕ್ಷೆಗೆ ತಮ್ಮ ಸಿದ್ಧತೆಯನ್ನು ಪ್ರಾರಂಭಿಸಿದರು.
2019ರಲ್ಲಿ ಪರಿ ಬಿಷ್ಣೋಯ್ ತಮ್ಮ 23ನೇ ವಯಸ್ಸಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಈ ಕಠಿಣ ಯುಪಿಎಸ್ಸಿ ಪರೀಕ್ಷೆಯಲ್ಲಿ 30 ನೇ ಅಖಿಲ ಭಾರತ ರ್ಯಾಂಕ್ ಪಡೆದರು.
ಪರಿ ಬಿಷ್ಣೋಯ್ ಅವರು 2023ರ ಡಿಸೆಂಬರ್ 24ರಂದು ಭವ್ಯ ಬಿಷ್ಣೋಯ್ ಅವರನ್ನು ವಿವಾಹವಾದರು. ಭವ್ಯ ಬಿಷ್ಣೋಯ್ ಅವರು ಹಿಸಾರ್ನ ಆದಂಪುರ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಭವ್ಯ ಅವರ ಅಜ್ಜ ದಿವಂಗತ ಭಜನ್ ಲಾಲ್ ಬಿಷ್ಣೋಯ್ ಮೂರು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಭವ್ಯ ಬಿಷ್ಣೋಯ್ ಅವರ ತಂದೆ ಕುಲದೀಪ್ ಬಿಷ್ಣೋಯ್ ಹರಿಯಾಣ ಜನಹಿತ್ ಕಾಂಗ್ರೆಸ್ನ ಸಂಸ್ಥಾಪಕರಾಗಿದ್ದಾರೆ.
ಪರಿ ಬಿಷ್ಣೋಯ್ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಸಿಕ್ಕಿಂನ ಗ್ಯಾಂಗ್ಟಾಕ್ನಲ್ಲಿ ಎಸ್ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು 2022ರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.