ನಿನ್ನೆ ರಾಜಧಾನಿಯಲ್ಲಿ ಅಕಾಲಿಕ ಮಳೆಗೆ ಮರಬಿದ್ದು 3 ವರ್ಷದ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.
ನಿನ್ನೆ ರಾತ್ರಿ ಜೀವನ್ ಭೀಮಾನಗರದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ ಮರಬಿದ್ದು 3 ವರ್ಷದ ಬಾಲಕಿ ರಕ್ಷಾ ಮೃತಪಟ್ಟಿದ್ದಾಳೆ. ಅಲ್ಲದೇ ಮರ ಬಿದ್ದ ಪರಿಣಾಮ ಮಗುವಿನ ತಂದೆಯೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗಳನ್ನು ಕಳೆದುಕೊಂಡು ದುಃಖದಲ್ಲಿ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆ ಬಗ್ಗೆ ಮಾತಾಡಿದ ಮೃತ ಮಗುವಿನ ಮಾವ ವಿಜಯ್, ರಾತ್ರಿ 8.30ರ ಸುಮಾರಿಗೆ ಮರ ಬಿದ್ದ ವಿಷಯ ತಿಳಿತು. ಆಸ್ಪತ್ರೆಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಮಗು ಉಳಿಯಲಿಲ್ಲ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಗು ರಕ್ತಸ್ರಾವ ಆಗಿ ಮೃತಪಟ್ಟಿದೆ. ಮಗು ತಂದೆಗೂ ಬೆನ್ನುಮೂಳೆ ಮುರಿದಿದೆ ಅಂತಿದ್ದಾರೆ. ಬಿಬಿಎಂಪಿಯವರು ಮರಗಳನ್ನ ತೆರವು ಮಾಡಬೇಕು. ಮಳೆ ಬಂದಾಗ ಪದೇ ಪದೇ ಇಂತ ಘಟನೆ ಆಗುತ್ತಲೇ ಇರುತ್ತವೆ. ಈಗ ರಾತ್ರಿ ಬಂದು ಪರಿಹಾರ ಕೊಡ್ತೀವೆ ಅಂತಿದ್ದಾರೆ. ಬದುಕಿ ಬಾಳಬೇಕಿದ್ದ ಪುಟ್ಟ ಕಂದಮ್ಮನ ಜೀವ ತೆಗೆದು ಬಿಟ್ಟಿದೆ. ಮರಗಳ ಬಗ್ಗೆ ಗಮನಹರಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.