ಬೆಂಗಳೂರು : ಕಬ್ಬು ಬೆಳೆಗಾರರ ಪ್ರತಿಭಟವೆ ತೀವ್ರಗೊಂಡ ಬೆನ್ನಲ್ಲೇ ಪ್ರತಿ ಟನ್ (1 ಸಾವಿರ ಕೆಜಿ) ಕಬ್ಬಿಗೆ (Sugar Cane) 3,300 ರೂ. ನ್ಯಾಯಯುತ ಮತ್ತು ಲಾಭದಾಯಕ ದರವನ್ನು ಸರ್ಕಾರ ನಿಗದಿ ಮಾಡಿದೆ.
ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಕಬ್ಬು ಬೆಳೆಗಾರರು ಒಪ್ಪಿಗೆ ನೀಡಿದ್ದಾರೆ. ಬೆಳಗಾವಿ ಗುರ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಶೇ.10.25 ಇಳುವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,550 ರೂ. ಎಫ್ಆರ್ಪಿ ದರವನ್ನು ನಿಗದಿ ಮಾಡಿತ್ತು. ಆದರೆ ಕರ್ನಾಟಕದಲ್ಲಿ ಸರಾಸರಿ ಇಳುವರಿ ಪ್ರಮಾಣ ಶೇ.9.5 ಮಾತ್ರ ಇದೆ. ಹೀಗಾಗಿ 3,550 ರೂ. ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದಿದ್ದರು. ಇನ್ನೊಂದು ಕಡೆ ರೈತರು ಗುಜರಾತ್, ಮಹಾರಾಷ್ಟ್ರದಲ್ಲಿ 3,500 ರೂ. ನೀಡುವಾಗ ನಮಗೆ ಯಾಕೆ ಕಡಿಮೆ ಹಣ ನೀಡಲಾಗುತ್ತಿದೆ ಎಂದು ಪ್ರಶ್ನಿಸಿ ಪ್ರತಿಭಟನೆಗೆ ಇಳಿದಿದ್ದರು.
ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸರ್ಕಾರ ರೈತರು ಮತ್ತು ಕಾರ್ಖಾನೆ ಮಾಲೀಕರ ಜೊತೆ ಸಂಧಾನ ನಡೆಸಿತ್ತು. ರೈತರು ಮತ್ತು ಕಾರ್ಖಾನೆ ಮಾಲೀಕರು ತಮ್ಮ ಹಠದಿಂದ ಹಿಂದಕ್ಕೆ ಸರಿಯಾದ ಕಾರಣ ಜಟಿಲವಾಗಿತ್ತು. ಈಗ ಸರ್ಕಾರ 50 ರೂ. ನೀಡುವುದಾಗಿ ಹೇಳಿದ ನಂತರ ಮಾಲೀಕರು ಪಟ್ಟು ಸಡಿಲಿಸಿ 50 ರೂ. ನೀಡುವುದಾಗಿ ಒಪ್ಪಿಕೊಂಡಿದ್ದಾರೆ.
ಪ್ರತಿ ಟನ್ಗೆ ಕಬ್ಬಿಗೆ ರಾಜ್ಯದಲ್ಲಿ 3,300 ರೂ. ಎಫ್ಆರ್ಪಿ ನಿಗದಿ ಮಾಡಲಾಗಿದೆ. ಹಾಲಿ 3,200 ರೂ.ಗೆ ಹೆಚ್ಚುವರಿಯಾಗಿ 100 ರೂ. ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಎಫ್ಆರ್ಪಿ ನಿಗದಿ ಮಾಡುವಾಗ ಕಟಾವು, ಸಾಗಾಣೆ ಸೇರಿಸಿ 3,550 ರೂ. ದರವನ್ನು ನಿಗದಿ ಮಾಡಿತ್ತು. ಆದರೆ ಕರ್ನಾಟಕದಲ್ಲಿ ಕಟಾವು, ಸಾಗಾಣೆ ಹೊರತುಪಡಿಸಿ 3,300 ರೂ. ದರ ನಿಗದಿ ಮಾಡಲಾಗಿದೆ.
ಕಾರ್ಖಾನೆಗಳು 50 ರೂ. ಹೆಚ್ಚಿಗೆ ನೀಡಲು ಒಪ್ಪಿಗೆ ನೀಡಿದರೆ ಸರ್ಕಾರದಿಂದಲೂ ಪ್ರತಿಟನ್ಗೆ 50 ರೂ. ಸಹಾಯಧನ ಸಿಗಲಿದೆ. ಸರ್ಕಾರ ಶೇ.11.25 ಇಳುವರಿ (ಉತ್ತರ ಕರ್ನಾಟಕದಲ್ಲಿ ಉತ್ತಮ ಇಳುವರಿ ಬರುತ್ತಿದೆ) ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,300 ರೂ. ದರವನ್ನು ನಿಗದಿ ಮಾಡಿದೆ. ಶೇ.10.25 ಇಳುವರಿಗೆ 3,200 ರೂ. ದರ ನಿಗದಿಯಾಗಿದೆ.
ಕಾರ್ಖಾನೆಗಳು ಒಂದೇ ಕಂತಿನಲ್ಲಿ 3,200 ರೂ. ನೀಡಬೇಕಾಗುತ್ತದೆ. ಉಳಿದ 50 ರೂ. ಬಾಕಿ ಹಣವನ್ನು 6 ತಿಂಗಳಲ್ಲಿ ಕೊಡಬೇಕು. ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 300 ಕೋಟಿ ರೂ. ಹೊರೆಯಾಗಲಿದೆ. ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ಈ ದರ ಜಾರಿ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ.
ನಿರ್ದಿಷ್ಟ ತೂಕದ ಕಬ್ಬನ್ನು ಅರೆದ ಬಳಿಕ ಉತ್ಪಾದನೆಯಾದ ಸಕ್ಕರೆಯ ಶೇಕಡವಾರು ಪ್ರಮಾಣವನ್ನು ಇಳುವರಿ ಪ್ರಮಾಣ ಎನ್ನಲಾಗುತ್ತದೆ. ಉದಾಹರಣೆಗೆ 100 ಕೆಜಿ ಕಬ್ಬು ಅರೆದಾಗ 10 ಕೆಜಿ ಸಕ್ಕರೆ ಸಿಕ್ಕಿದರೆ ಆಗ ಆ ಕಬ್ಬಿನ ಇಳುವರಿ ಪ್ರಮಾಣ ಶೇ.10 ಆಗುತ್ತದೆ.
ಕೇಂದ್ರ ಸರ್ಕಾರವು 2025-26ನೇ ಸಾಲಿಗೆ ಟನ್ ಕಬ್ಬಿಗೆ 3,550 ರೂ ಎಫ್ಆರ್ಪಿ ದರ ನಿಗದಿ ಮಾಡಿದೆ. ಈ ಎಫ್ಆರ್ಪಿ ದರ ಸಿಗಬೇಕಾದರೆ ಇಳುವರಿ ಪ್ರಮಾಣದ ಮಿತಿ ಶೇ.10.25 ಇರಬೇಕು ಎಂದು ತಿಳಿಸಿದೆ. ಅಂದರೆ 1,000 ಕೆಜಿ ಕಬ್ಬು ಅರೆದರೆ 102.5 ಕೆಜಿ ಸಕ್ಕರೆ ಉತ್ಪಾದನೆಯಾಗಬೇಕಾಗುತ್ತದೆ. ಒಂದು ವೇಳೆ ಈ ಮಿತಿಗಿಂತ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯಾದರೆ ಒಂದು ಟನ್ ಕಬ್ಬಿಗೆ 3,550 ರೂ. ಎಫ್ಆರ್ಪಿ ದರ ಸಿಗುವುದಿಲ್ಲ.

































