ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮರಿ ನಾರಾಯಣಪುರ ಐವರು ಮಕ್ಕಳು ಭಾನುವಾರ(ಏ.6) ಸಂಜೆಯಿಂದ ನಾಪತ್ತೆಯಾಗಿದ್ದು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ಧನಂಜಯ್ (14), ಲೋಹಿತ್ (12), ಲಕ್ಷ್ಮೀಶ (9), ಚರಣ್ರಾಜ್ (9), ಭುವನ್ (8) ನಾಪತ್ತೆಯಾದವರು.
ಭಾನುವಾರ ಸಂಜೆ 5 ಗಂಟೆವರೆಗೂ ಮಕ್ಕಳನ್ನು ಗಮನಿಸಿರುವ ಗ್ರಾಮಸ್ಥರು ನಂತರ ಗಮನಿಸಿಲ್ಲ. ಮಕ್ಕಳು ಮೀನು ಹಿಡಿಯಲು ಹೋಗುತ್ತಿದ್ದರು ಎಂಬ ಮಾಹಿತಿ ಸಹ ಇದೆ. ರಾತ್ರಿಯಾದರೂ ಮಕ್ಕಳು ವಾಪಾಸ್ ಬಾರದ ಕಾರಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಆದರೆ ಎಲ್ಲೂ ಸಹ ಸುಳಿವು ಸಿಕ್ಕಿರಲಿಲ್ಲ. ಆದರೆ ಇಡೀ ರಾತ್ರಿ ಬಾಳೆ ಎಲೆ ಹಾಸಿಕೊಂಡು ಮಲಗಿದ್ದ ಮಕ್ಕಳು ಬೆಳಗ್ಗೆಯಾಗುತ್ತಿದ್ದಂತೆ ಊರಿನತ್ತ ಬಂದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ಕಿಡಿಗೇಡಿಗಳು ಕಿಡ್ನಾಪ್ ಆಗಿದ್ದಾರೆ ಎಂದು ಸಹ ವದಂತಿ ಹಬ್ಬಿಸಿದ್ದರು.