ಚಂಡೀಗಢ : ಉತ್ತರಾಖಂಡದ ಡೆಹ್ರಾಡೂನ್ನ ಒಂದೇ ಕುಟುಂಬದ 7 ಮಂದಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ಸಂಭವಿಸಿದೆ.
ಉತ್ತರಾಖಂಡ ಡೆಹ್ರಾಡೂನ್ನ ಪ್ರವೀಣ್ ಮಿತ್ತಲ್ (42) ಅವರ ಪತ್ನಿ, ಪೋಷಕರು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಮೃತರೆಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಲದ ಸುಳಿಗೆ ಸಿಲುಕಿ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ಪಂಚಕುಲದ ಸೆಕ್ಟರ್ 27ರಲ್ಲಿ ಸೋಮವಾರ ರಾತ್ರಿ ಕಾರೊಂದನ್ನು ಪಾರ್ಕ್ ಮಾಡಲಾಗಿತ್ತು. ಆ ಕಾರಿನಲ್ಲಿದ್ದ 6 ಮಂದಿ ಅಸ್ವಸ್ಥರಾಗಿ ಪರದಾಡುತ್ತಿದ್ದರು. ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ವಿಚಾರಿಸಿದಾಗ ಆತ, ನಾನು ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ. ಹಾಗಾಗಿ ನನ್ನ ಕುಟುಂಬದವರೆಲ್ಲರೂ ವಿಷ ಸೇವಿಸಿದ್ದೇವೆ. ಇನ್ನು 5 ನಿಮಿಷದಲ್ಲಿ ನಾನೂ ಸಾಯುತ್ತೇನೆ ಎಂದು ಹೇಳಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಸ್ಥಳೀಯರು ಕಾರಿನಲ್ಲಿದ್ದ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಪರಲ್ಲಾಗಲೇ 6 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಕಾರಿನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಸಹ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಡೆಹ್ರಾಡೂನ್ ಮೂಲದ ಪ್ರವೀಣ್ ಮಿತ್ತಲ್ ಅವರ ಕುಟುಂಬವು ಸೋಮವಾರ ರಾತ್ರಿ ಪಂಚಕುಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಹಿಂತಿರುಗುವಾಗ ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿದೆ. ಕಾರಿನಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಸಾಲಭಾದೆಯಿಂದ ಕುಟುಂಬಸ್ಥರೆಲ್ಲರು ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆಯಲಾಗಿದೆ. ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯೆಂದು ತಿಳಿದುಬಂದಿದೆ. ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.