71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದ್ದು, 2023ನೇ ಸಾಲಿನ ಪ್ರಶಸ್ತಿಯಲ್ಲಿ ಫೀಚರ್ ಫಿಲಂನ ಪ್ರಾದೇಶಿಕ ವಿಭಾಗದಲ್ಲಿ ‘ಕಂದೀಲು’ ಹಾಗೂ ನಾನ್ ಫೀಚರ್ ವಿಭಾಗದಲ್ಲಿ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ ಕಿರುಚಿತ್ರಕ್ಕೆ ಪ್ರಶಸ್ತಿಗಳು ದೊರಕಿವೆ.
ನಾನ್ ಫೀಚರ್ ಹಾಗೂ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ‘ಕಂದೀಲು’ ಹಾಗೂ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾದದ್ದು’ ಕಿರುಚಿತ್ರಕ್ಕೆ ರಜತ ಕಮಲ ಹಾಗೂ ಎರಡು ಲಕ್ಷ ನಗದು ಸಿಗಲಿದೆ.
ಈ ಬಾರಿ ಫೀಚರ್ ಚಿತ್ರ ವಿಭಾಗದಲ್ಲಿ ಒಟ್ಟು ನಾಲ್ಕು ಕನ್ನಡ ಚಿತ್ರಗಳು ಕೊನೆಯ ಸುತ್ತಿನವರೆಗೂ ಬಂದಿದ್ದು, ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’, ಯಶೋಧ ಪ್ರಕಾಶ್ ಕೊಟ್ಟುಕತ್ತೀರ ನಿರ್ದೇಶನದ ‘ಕಂದೀಲು’, ನಾಗಿಣಿ ಭರಣ ನಿರ್ದೇಶನದ ‘ಜೀನಿಯಸ್ ಮುತ್ತಾ’ ಹಾಗೂ ಬಡಿಗೇರ್ ದೇವೇಂದ್ರ ನಿರ್ದೇಶನದ ‘ಇನ್’ ಚಿತ್ರಗಳು ಸ್ಪರ್ಧೆಯಲ್ಲಿದ್ದು, ಈ ಪೈಕಿ ‘ಕಂದೀಲು’ ಮಾತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
‘ಕಂದೀಲು’ ಚಿತ್ರವನ್ನು ಯಶೋದಾ ಪ್ರಕಾಶ್ ಕೊಟ್ಟುಕತ್ತಿರಾ ನಿರ್ಮಿಸಿ-ನಿರ್ದೇಶಿಸಿದ್ದು, ಚಿತ್ರದಲ್ಲಿ ಪ್ರಭಾಕರ್ ಬ್ರಹ್ಮಾವರ, ವನಿತಾ ರಾಜೇಶ್, ಗುರು ತೇಜಸ್, ವೆಂಕಟೇಶ್ ಪ್ರಸಾದ್ ಮುಂತಾದವರು ನಟಿಸಿದ್ದಾರೆ.