ದುಬೈನಿಂದ ಪಾಸ್​ಪೋರ್ಟ್​ ವಿಳಾಸ ಬದಲಿಗೆ ಅರ್ಜಿ ಹಾಕಿದ ಮೋಸ್ಟ್ ವಾಂಟೆಡ್‌ ಮೈನಿಂಗ್‌ ಡಾನ್…!

ಸಹರಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಾಜಿ ಎಂಎಲ್​ಸಿ, ಮೈನಿಂಗ್​ ಮಾಫಿಯಾ ಡಾನ್ ಹಾಜಿ ಇಕ್ಬಾಲ್‌ ದುಬೈನಲ್ಲಿ ಕುಳಿತು ತನ್ನ ಪಾಸ್​ಪೋರ್ಟ್​ನಲ್ಲಿ ವಿಳಾಸ ಬದಲಾವಣೆ ಮಾಡಲು ಕೋರಿ ಗಾಜಿಯಾಬಾದ್​ ಪಾಸ್​ಪೋರ್ಟ್ ಕಚೇರಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಇದರಿಂದ ಒಂದು ವರ್ಷದಿಂದ ತಲೆಮರೆಸಿಕೊಂಡಿರುವ ಇಕ್ಬಾಲ್​ ವಿದೇಶದಲ್ಲಿ ಇರುವುದು ಖಚಿತವಾಗಿದೆ. ಈತನ​ ವಿರುದ್ಧ ಲುಕ್​ಔಟ್​ ನೊಟೀಸ್​ ಕೂಡ ಹೊರಡಿಸಲಾಗಿದೆ.

ಮೋಸ್ಟ್ ವಾಂಟೆಡ್ ಆಗಿರುವ ಹಾಜಿ ಇಕ್ಬಾಲ್ ಮಿರ್ಜಾಪುರದ ನಿವಾಸಿಯಾಗಿದ್ದು, ಮೈನಿಂಗ್ ದಂಧೆ ಪ್ರಕರಣದಲ್ಲಿ ಬಂಧಿಸಲು ಉತ್ತರ ಪ್ರದೇಶದ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ, ಈತನ ಬಂಧನಕ್ಕೆ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಈ ಹಿಂದೆ ಹಲವೆಡೆ ಪೊಲೀಸರು ದಾಳಿ ನಡೆಸಿದ್ದರೂ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಳೆದ ಮೂರು ದಿನಗಳ ಹಿಂದಷ್ಟೇ ದುಬೈನ ಉದ್ಯಮಿಯೊಂದಿಗೆ ಹಾಜಿ ಇಕ್ಬಾಲ್ ಕಾಣಿಸಿಕೊಂಡಿರುವ​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Advertisement

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಾಜಿ ಇಕ್ಬಾಲ್‌ ಫೋಟೋ

ಇದರ ಮರುದಿನವೇ ಇಕ್ಬಾಲ್ ತನ್ನ ಪಾಸ್‌ಪೋರ್ಟ್​ ವಿಳಾಸವನ್ನು ಬದಲಾಯಿಸಲು ಗಾಜಿಯಾಬಾದ್ ಕಚೇರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಬಯಲಾಗಿದೆ. ಇದರಲ್ಲಿ ತನ್ನ ಹೊಸ ವಿಳಾಸವನ್ನು ಮಿರ್ಜಾಪುರದ ಬದಲಿಗೆ ಗುರುಗ್ರಾಮ್​ ಎಂದು ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಷಯ ಗೊತ್ತಾದ ಕೂಡಲೇ ಪೊಲೀಸರು ಅಲರ್ಟ್​ ಆಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಕ್ಬಾಲ್ ದುಬೈನಿಂದಲೇ ಅರ್ಜಿ ಸಲ್ಲಿಸಿರುವುದು ಬಹಿರಂಗವಾಗಿದೆ. ಆದ್ದರಿಂದ ಸ್ಥಳೀಯ ಪೊಲೀಸರು ರಾಯಭಾರಿ ಕಚೇರಿಯ ಪ್ರಕ್ರಿಯೆ ಪೂರ್ಣಗೊಳಿಸುವುದರೊಂದಿಗೆ ದುಬೈನಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಡಾ.ದಿನೇಶ್​ ಚಂದ್ರ ಪ್ರತಿಕ್ರಿಯಿಸಿ, “ಹಾಜಿ ಇಕ್ಬಾಲ್ ಪತ್ತೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ ನಂತರದ ದಿನಗಳಿಂದ ದುಬೈನಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಬಂದಿದೆ” ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಕೆಲವು ದಿನಗಳ ಹಾಜಿ ಇಕ್ಬಾಲ್ ಪುತ್ರ ಜಾವೇದ್​ಗೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಸಿಕ್ಕಿದೆ. ದರೋಡೆಕೋರ ಕಾಯ್ದೆಯಡಿಯಲ್ಲಿ ವಶಪಡಿಸಿಕೊಂಡ ಹಲವಾರು ಆಸ್ತಿಗಳ ಪ್ರಾತಿನಿಧ್ಯಗಳನ್ನು ಕಾಯ್ದೆಯ ನಿಬಂಧನೆಗಳ ಪ್ರಕಾರ ವಿಲೇವಾರಿ ಮಾಡಲು ಕೋರ್ಟ್ ಸ್ಥಳೀಯ ಆಡಳಿತಕ್ಕೆ ಆದೇಶಿಸಿದೆ.

ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಯಾವುದೇ ನೊಟೀಸ್ ನೀಡದೆ ಜಾವೇದ್​ಗೆ ಸೇರಿದ ಆಸ್ತಿಯನ್ನು ಸೀಲ್ ಮಾಡಿದೆ. ಆ ಆಸ್ತಿಯನ್ನು ಸರ್ಕಾರಿ ಆಸ್ತಿಗೆ ಲಗತ್ತಿಸಿದೆ. ಇದಲ್ಲದೇ, ಅವರು ಪೊಲೀಸ್ ವಶದಲ್ಲಿದ್ದರೂ ಕೆಲವು ಆಸ್ತಿಗಳನ್ನು ಹರಾಜು ಮಾಡಿದ್ದಾರೆ. ಇದು ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಹಾಜಿ ಇಕ್ಬಾಲ್ ಪುತ್ರನ ಪರ ವಕೀಲ ಇಂದ್ರಭಾನ್ ಯಾದವ್ ತಿಳಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ಕೋರ್ಟ್​, ಸಂಬಂಧಿಸಿದ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡ ಆಸ್ತಿ ಹರಾಜು ಹಾಕುವ ಹಕ್ಕು ಆಡಳಿತಕ್ಕೆ ಇಲ್ಲ ಎಂದು ಹೇಳಿರುವುದಾಗಿ ವಕೀಲ ಯಾದವ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ಹಾಜಿ ಇಕ್ಬಾಲ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement