‘ಸಾಹಸೋದ್ಯಮ’ಕ್ಕೆ ಕೈಹಾಕುವವರಿಗೆ ಪ್ರತಿ ತಿಂಗಳು 25,000 ರೂ ಭತ್ಯೆ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು: ಯುವಕರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಟಾರ್ಟಪ್ ಪೀಡಿಯಾ ಪೋಸ್ಟ್‌ ಪ್ರಕಾರ, ಈಗಿರುವ ಉದ್ಯೋಗ ಬಿಟ್ಟು ‘ಸಾಹಸೋದ್ಯಮ’ಕ್ಕೆ ಕೈಹಾಕುವವರಿಗೆ ಸರ್ಕಾರ ಪ್ರತಿ ತಿಂಗಳು 25,000 ರೂಪಾಯಿ ಭತ್ಯೆ/ವೇತನ ನೀಡಲಿದೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮನಿಕಂಟ್ರೋಲ್ ಸ್ಟಾರ್ಟಪ್ ಕಾಂಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ಸಿಗಲಿದ್ದು, ದೇಶದಲ್ಲೇ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಅತಿಯಾದ ಹಣದುಬ್ಬರ/ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಭ್ಯರ್ಥಿಗಳ ದಿನನಿತ್ಯದ ಖರ್ಚಿಗಾಗಿ ಒಂದು ವರ್ಷಗಳ ಕಾಲ 25 ಸಾವಿರ ರೂಪಾಯಿ ಭತ್ಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಈ ರಾಜೀವ್‌ ಗಾಂಧಿ ಎಂಟರ್‌ಪ್ರ್ಯೂನರ್ಶಿಪ್ ಪ್ರೋಗ್ರಾಂ (RGEP) ಯೋಜನೆಯನ್ನು ಪ್ರಕಟಿಸಿದ್ದರು. ವಿಜ್ಞಾನ ಅಥವಾ ಇಂಜಿನಿಯರಿಂಗ್‌ ಹಿನ್ನೆಲೆ ಹೊಂದಿರುವ ಯುವ ಸಾಹಸೋದ್ಯಮಿಗಳಿಗೆ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಅವರಿಗಾಗಿ K-Tech ಇನ್ನೋವೇಶನ್‌ ಹಬ್‌ನಿಂದ ಮಾರ್ಗದರ್ಶನ ಹಾಗೂ ಭತ್ಯೆ ನೀಡಲಿದೆ. ಕಳೆದ ವಿಧಾನಸಭೆ ಚುನಾವಣೆ ಮುನ್ನ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಹಾಗೂ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಗ್ಯಾರಂಟಿ ಯೋಜನೆಗಳೇ ತೆಲಂಗಾಣದಲ್ಲೂ ಕಾಂಗ್ರೆಸ್‌ ಕೈಹಿಡಿದಿದ್ದವು. ಆದರೆ ಇನ್ನೊಂದು ಕಡೆ, ಈ ಗ್ಯಾರಂಟಿ ಯೋಜನೆಗಳು ಆಡಳಿತ, ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ತತ್ತರಿಸಿ ಹೋಗಿರುವ ಬಡ – ಮಧ್ಯಮ ವರ್ಗದ ಜನರಿಗೆ ಇದರಿಂದ ಭಾರೀ ಅನುಕೂಲವಾಗಿದೆ ಎಂದು ಗ್ಯಾರಂಟಿ-ಪರ ಇರುವವರು ವಾದಿಸಿದರೆ, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಗ್ಯಾರಂಟಿ-ವಿರೋಧಿಗಳ ವಾದವಾಗಿದೆ. ಇನ್ನು ಈ ಹೊಸ RGEP ಯೋಜನೆ ಯಾವಾಗ, ಹೇಗೆ ಜಾರಿಯಾಗುತ್ತದೆ? ಏನೆಲ್ಲಾ ನಿಯಮಗಳಿರುತ್ತವೆ? ಎಷ್ಟರ ಮಟ್ಟಿಗೆ ಸಫಲವಾಗಲಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement