ಸಿದ್ದರಾಮಯ್ಯ ಪತ್ನಿಯೇ 56 ಕೋಟಿ ಫಲಾನುಭವಿ, ತನಿಖೆ ಅಗತ್ಯ : ಹೈಕೋರ್ಟ್ ತೀರ್ಪಿನ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಜಾಗೊಳಿಸಿದೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯೇ ಫಲಾನುಭವಿಯಾಗಿರುವ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆಯ ಅಗತ್ಯವನ್ನು ಕರ್ನಾಟಕ ಹೈಕೋರ್ಟ್ ಒತ್ತಿಹೇಳಿದೆ. ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ತಾನು ಯಾವುದೇ ಶಿಫಾರಸು ಮಾಡಿಲ್ಲ. ಅಥವಾ ದಾಖಲೆಗಳಿಗೆ ಸಹಿ ಹಾಕಿಲ್ಲ ಎಂಬ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ. ತಮ್ಮ ಪತ್ನಿ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರ್ಜಿದಾರರಿಗೆ ಅರಿವಿಲ್ಲದಿರಲು ಸಾಧ್ಯವಿಲ್ಲ. ಪ್ರಕರಣ ನಡೆದಿರುವುದು ಮಂಜಿನ ತೆರೆ ಹಿಂದೆಯಲ್ಲ. ಪರದೆಯ ಹಿಂದೆ ನಡೆದಿರುವುದಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಮಂಜಸವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಮುಡಾಗೆ ಮನವಿ ಸಲ್ಲಿಸಿ, 2001 ರಲ್ಲಿ ಮುಡಾ ಸ್ವಾಧೀನ ಪಡಿಸಿಕೊಂಡು ನಿವೇಶನಗಳನ್ನು ರಚನೆ ಮಾಡಿದೆ. ಹೀಗಾಗಿ 50*50 ಅನುಪಾತದಲ್ಲಿ ನಿವೇಶನಗಳನ್ನು ಪರಿಹಾರವಾಗಿ ನೀಡಬೇಕು ಎಂದು ಕೋರಿದ್ದರು. ಆದರೆ, ಮನವಿ ಸಲ್ಲಿಸಿದ್ದ ಸಂದರ್ಭದಲ್ಲಿ 60*40 ಅನುಪಾತದ ನಿವೇಶನಗಳ ಹಂಚಿಕೆಗೆ ಮಾತ್ರ ಅವಕಾಶವಿತ್ತು. ಇದಾದ ಕೆಲವು ದಿನಗಳಲ್ಲಿಯೇ 2015ರಲ್ಲಿ 50*50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಮಗ ಭಾಗಿಯಾಗಿದ್ದು, ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಪೀಠ ಹೇಳಿದೆ. 3.56 ಲಕ್ಷದಿಂದ 56 ಕೋಟಿ: ಈ ಎಲ್ಲಾ ಪ್ರಕ್ರಿಯೆಯಲ್ಲಿ ಪರಿಹಾರ ಮೊತ್ತವನ್ನು 3.56 ಲಕ್ಷ ರೂ.ಗಳಿಂದ 56 ಕೋಟಿ ರೂ.ಗಳಿಗೆ ನಿರ್ಧರಿಸುವ ಸಂಪೂರ್ಣ ವಹಿವಾಟಿನ ಫಲಾನುಭವಿ ಅರ್ಜಿದಾರರ ಕುಟುಂಬದವರಾಗಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬದ ಪರವಾಗಿ ನಿಯಮಗಳನ್ನು ಹೇಗೆ ಮತ್ತು ಏಕೆ ಸಡಿಲಗೊಳಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕಾಗಿದೆ. ಪ್ರಕರಣದಲ್ಲಿ ಫಲಾನುಭವಿಯಾಗಿರುವವರು ಅರ್ಜಿದಾರ (ಸಿದ್ದರಾಮಯ್ಯ) ಅವರ ಕುಟುಂಬದ ಸದಸ್ಯರಾಗಿದ್ದು, ಪರಿಹಾರ ಮೊತ್ತವೂ ಹೆಚ್ಚಾಗಿದ್ದು, ಭಾರಿ ಲಾಭವಾಗಿದೆ. ಒಂದು ವೇಳೆ ಫಲಾನುಭವಿ ಬೇರೊಬ್ಬರಿದ್ದಿದ್ದರೆ ಅರ್ಜಿದಾರರ ಪ್ರಕರಣದಿಂದ ಮುಕ್ತಿ ನೀಡಬಹುದಾಗಿತ್ತು. 1996 ರಿಂದ 1999ರ ವರೆಗೆ ಮತ್ತು 2004 ರಿಂದ 2005 ರ ವರೆಗೆ ಸಿದ್ದರಾಮಯ್ಯ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರು. 2013 ರಿಂದ 2018 ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ಪ್ರಸ್ತುತ 2023 ರಿಂದ ಮತ್ತೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2018 ಮತ್ತು 2023 ರ ಸಂದರ್ಭದಲ್ಲಿ ಅವರ ಮಗ ಶಾಸಕರಾಗಿದ್ದರು. 1935 ರಲ್ಲಿ ಕೇವಲ 300 ರೂ. ಗಳ ಸಣ್ಣ ಬೆಲೆಯಲ್ಲಿ ಈ ಆಸ್ತಿಯನ್ನು ಖರೀದಿಸಲಾಗಿತ್ತು. 1997 ರಲ್ಲಿ ಮಾಲೀಕರ ಪರವಾಗಿ ನಿರ್ಧರಿಸಿದ ಪರಿಹಾರ ಮೊತ್ತ 3,56,000 ಆಗಿದೆ. 2021 ರಲ್ಲಿ 56 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರು ಅಧಿಕಾರ ಚುಕ್ಕಾಣಿ ಹಿಡಿಯದೇ ಇದ್ದಿದ್ದರೆ ಇಷ್ಟು ದೊಡ್ಡ ಪ್ರಮಾಣದ ಲಾಭ ಹರಿದು ಬರುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ, ಸಾಮಾನ್ಯ ಮನುಷ್ಯರು ನಿಯಮಗಳನ್ನು ಬದಲಾಯಿಸಿ ಇಷ್ಟು ಶೀಘ್ರದಲ್ಲಿ ಇಷ್ಟರ ಪ್ರಮಾಣದಲ್ಲಿ ಲಾಭ ಗಳಿಸುವುದು ಸಾಧ್ಯವಾಗದ ಸಂಗತಿಯಾಗಿದೆ ಎಂದು ಪೀಠ ಹೇಳಿದೆ. ಪ್ರಕರಣದಲ್ಲಿ ಕುತೂಹಲಕರ ಸಂಗತಿಯೆಂದರೆ ಮುಖ್ಯಮಂತ್ರಿ (ಅರ್ಜಿದಾರ) ಪತ್ನಿಯ ಹೆಸರಿನಲ್ಲಿ 14 ಮಾರಾಟ ಪತ್ರಗಳನ್ನು ನೋಂದಾಯಿಸಿದ ನಂತರ ಮಾರ್ಗಸೂಚಿಗಳನ್ನು ರೂಪಿಸುವವರೆಗೂ ಪರಿಹಾರ ನಿವೇಶನಗಳ ಹಂಚಿಕೆಯನ್ನು ಸ್ಥಗಿತಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆಯಿಂದ ಮುಡಾ ಆಯುಕ್ತರಿಗೆ ನಿರ್ದೇಶನ ನೀಡಲಾಗಿತ್ತು. ಬದಲಿ ನಿವೇಶನ ಹಂಚಿಕೆ ಮಾಡಿರುವುದು ಭೂ ಸ್ವಾಧೀನ ನಿಯಮಗಳು 2009 ಮತ್ತು 1991 ರ ಸ್ವಯಂಪ್ರೇರಿತ ಭೂಮಿ ಬಿಟ್ಟುಕೊಡುವ ನಿಯಮಗಳಿಗೆ ತದ್ವಿರುದ್ಧವಾಗಿದೆ. ಈ ಅಂಶಗಳನ್ನು ಪರಿಶೀಲಿಸಿದಲ್ಲಿ ಕೆಲವು ತಪ್ಪುಗಳಿರುವುದು ಗೊತ್ತಾಗಲಿದೆ ಎಂದು ಪೀಠ ತಿಳಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement