ಬೆಂಗಳೂರು: ಒಂದು ಕಾಲದಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಸರಾಗಿದ್ದ ಕರ್ನಾಟಕದಲ್ಲಿ ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಧರ್ಮದ ಹೆಸರಿನಲ್ಲಿ ಹತ್ಯೆ, ಹಲ್ಲೆ, ದೌರ್ಜನ್ಯದಂತಹ ದುಷ್ಕೃತ್ಯಗಳು ನಿರಂತರವಾಗಿ ಮುಂದುವರೆದಿವೆ. 2021 ರಲ್ಲಿ 208 ರಷ್ಟಿದ್ದ ಇಂತಹ ಪ್ರಕರಣಗಳು 2024ರಲ್ಲಿ 345ರಷ್ಟು ಅಂದರೆ ಶೇ. 64. 87 ರಷ್ಟು ಏರಿಕೆಯಾಗಿದೆ.
ಈ ವರ್ಷದ ಮೇ ವರೆಗೂ 123 ಪ್ರಕರಣ ದಾಖಲು: ರಾಜ್ಯ ಅಪರಾಧ ದಾಖಲೆ ಬ್ಯೂರೋ ಮಾಹಿತಿ ಪ್ರಕಾರ, ಈ ವರ್ಷದ ಮೇ ವರೆಗೆ ರಾಜ್ಯದಾದ್ಯಂತ ಒಟ್ಟು 123 ಪ್ರಕರಣಗಳು ವರದಿಯಾಗಿವೆ. ಕೋಮು ಮತ್ತು ಧಾರ್ಮಿಕ ಗಲಭೆಗಳ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 133. 31 ರಷ್ಟು ಹೆಚ್ಚಳವಾಗಿದೆ.
2021ರಲ್ಲಿ ಇಂತಹ 9 ಪ್ರಕರಣಗಳಿದ್ದವು. ಅವು 2024ರಲ್ಲಿ 21 ಕ್ಕೆ ಏರಿಕೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿ, ರಾಜಕೀಯ ವಿಭಜನೆ ವಾತಾವರಣ ಮತ್ತು ಕೆಲವು ಜಿಲ್ಲೆಗಳಲ್ಲಿ ದೀರ್ಘಕಾಲದ ಧಾರ್ಮಿಕ ಅಥವಾ ಜಾತಿ ಆಧಾರಿತ ಉದ್ವಿಗ್ನತೆಗಳು ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಜ್ಞರು ಹೇಳುತ್ತಾರೆ.
ಪರಿಣಾಮ ಬೀರದ ಕಾರ್ಯಪಡೆ: ಕೋಮು ವಿರೋಧಿ ಕಾರ್ಯ ಪಡೆಯಂತಹ ಸರ್ಕಾರದ ಕ್ರಮಗಳು ಇನ್ನೂ ಯಾವುದೇ ಪರಿಣಾಮ ಬೀರುವುದಿಲ್ಲ. ಧರ್ಮಕ್ಕೆ ಸಂಬಂಧಿಸಿದ ಅಪರಾಧಗಳನ್ನು ವಿವಿಧ ಸೆಕ್ಷನ್ ಗಳಡಿ ದಾಖಲು ಮಾಡಲಾಗುತ್ತಿದೆ. ಜಾತಿ ಆಧಾರಿತ, ಕೋಮುವಾದ, ಭಾಷಾವಾರು, ಪ್ರಾದೇಶಿಕ, ಧಾರ್ಮಿಕ ಮತ್ತು ಇತರ ವಿಷಯಗಳಾಗಿ ವರ್ಗೀಕರಿಸಲಾಗಿದೆ.
ಈ ಕುರಿತು ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಮಿಷನರ್ ಒಬ್ಬರು TNIE ಜೊತೆಗೆ ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ, ರಾಜಕೀಯ ವಿಭಜನೆ ಮತ್ತು ಐತಿಹಾಸಿಕ ಧಾರ್ಮಿಕ ಅಥವಾ ಜಾತಿಯ ಉದ್ವಿಗ್ನತೆಗಳು ಪ್ರಮುಖ ಕೊಡುಗೆಗಳಾಗಿವೆ ಎಂದು ಪುನರುಚ್ಚರಿಸಿದರು. “ಆರೋಪಿಗಳನ್ನು ಬಂಧಿಸುವುದು ಅಥವಾ ತೊಂದರೆ ಕೊಡುವವರ ವಿರುದ್ಧ ಗೂಂಡಾ ಕಾಯ್ದೆಯಂತಹ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ” ಎಂದು ಕಮಿಷನರ್ ಹೇಳಿದರು.
ಸಾಮಾಜಿಕ ಜಾಲತಾಣಗಳಿಂದ ಗಲಭೆಗೆ ಪ್ರಚೋದನೆ: ಧಾರ್ಮಿಕ ಹಿಂಸಾಚಾರ, ಸಾಮಾಜಿಕ ಜಾಲತಾಣಗಳಿಂದ ಗಲಭೆಗೆ ಪ್ರಚೋದನೆಯಾಗುತ್ತಿದೆ. ಕೆಲವೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಪೋಸ್ಟ್ ಮಾಡುವ ವ್ಯಕ್ತಿಯನ್ನು ತ್ವರಿತವಾಗಿ ಬಂಧಿಸಲಾದರೂ ಅದರಲ್ಲಿ ತೊಡಗಿಕೊಂಡ ವ್ಯಕ್ತಿ ರಾಜಕಾರಣಿಯಾಗಿದ್ದರೆ ಬಂಧನ ವಿಳಂಬವಾಗುತ್ತದೆ. ಯಾವುದೇ ಧಾರ್ಮಿಕ ಅಥವಾ ಕೋಮು ಸಮಸ್ಯೆ ಉದ್ಭವಿಸಿದರೆ ಅಲ್ಲಿ ರಾಜಕೀಯ ಪಕ್ಷದ ಬೆಂಬಲ ಇರುತ್ತದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೋಮು ಅಪರಾಧಿಗಳಿಗೆ ರಾಜಕೀಯ ಪ್ರೋತ್ಸಾಹ ನೀಡುವುದು ರಾಜ್ಯದಲ್ಲಿ ಹೊಸ ವಿದ್ಯಮಾನವಲ್ಲ ಎಂದು ಅವರು ಹೇಳಿದರು.
ಉತ್ತಮ ಗುಪ್ತಚರ ಘಟಕ ಮೂಲಕ ಗಲಭೆಗಳು ಮತ್ತು ಇತರ ಧರ್ಮ ಸಂಬಂಧಿತ ಸಮಸ್ಯೆಗಳನ್ನು ತಡೆಯಬಹುದು. ಆದರೆ ರಾಜ್ಯ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಗುಪ್ತಚರ ಘಟಕಗಳು ದುರ್ಬಲವಾಗಿವೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ಹತ್ತಿರದಲ್ಲಿರುವುದರಿಂದ ರಾಜಕೀಯ ಪಕ್ಷಗಳು ಮತ್ತು ಅವರ ಕಾರ್ಯಕರ್ತರು ಸಕ್ರಿಯವಾಗುತ್ತಿದ್ದಾರೆ. ಸರ್ಕಾರವು ಕೋಮು ವಿರೋಧಿ ಪಡೆ ಮತ್ತು ವಿಶೇಷ ಕಾರ್ಯ ಪಡೆಗಳಂತಹ ಹಲವಾರು ವಿಶೇಷ ಕ್ರಮಗಳನ್ನು ಘೋಷಿಸಿದ್ದರೂ ಅದು ಕಾಗದದ ಮೇಲೆ ಉಳಿಯುತ್ತವೆ. ಆಗಾಗ್ಗೆ ಪ್ರತಿಕ್ರಿಯಾತ್ಮಕ ಕ್ರಮಗಳಾಗಿ ಘೋಷಿಸಲ್ಪಡುತ್ತವೆ. ಸರ್ಕಾರ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಐಪಿಎಸ್ ಅಧಿಕಾರಿ ಹೇಳಿದರು.
ಜಿಲ್ಲೆಯೊಂದರ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ಮತ್ತೊಬ್ಬ ಐಪಿಎಸ್ ಅಧಿಕಾರಿ, ಸಮಾಜದಲ್ಲಿ ಕೋಮುದ್ವೇಷದ ಭಾವನೆ ಬೇರೂರಿದೆ. ಜನರು ಇತರ ಸಮುದಾಯಗಳ ಸಣ್ಣ ತಪ್ಪುಗಳು ಅಥವಾ ಕಿಡಿಗೇಡಿತನವನ್ನು ಸಹಿಸುವುದಿಲ್ಲ. ಧಾರ್ಮಿಕ ಮೆರವಣಿಗೆಯು ಸಣ್ಣ ಗೊಂದಲ ಅಥವಾ ಹಾನಿಯನ್ನು ಉಂಟುಮಾಡಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಕೆಲವು ಜಿಲ್ಲೆಗಳಲ್ಲಿ ದೀರ್ಘಕಾಲದ ಧಾರ್ಮಿಕ ಮತ್ತು ಜಾತಿ ಆಧಾರಿತ ಉದ್ವಿಗ್ನತೆಗಳು ಅಪರಾಧ ಹೆಚ್ಚಳಕ್ಕೆ ಕಾರಣವಾಗಿವೆ. ಅಪರಾಧಿಗಳನ್ನು ಪ್ರೋತ್ಸಾಹಿಸುತ್ತಿದ್ದು, ಅವರಿಗೆ ಶಿಕ್ಷೆಯಿಂದ ಬಚಾವ್ ಆಗುತ್ತಿದ್ದಾರೆ. ಅಂತಹ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದರು.
ಸಾಮಾಜಿಕ ಮಾಧ್ಯಮ ಫೋಸ್ಟ್ ನಿಂದ ಪ್ರಚೋದನೆ: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಿಂದ ಧರ್ಮಕ್ಕೆ ಸಂಬಂಧಿಸಿದ ಹಿಂಸಾಚಾರಗಳು ಹೆಚ್ಚಾಗುತ್ತಿವೆ ಎಂದು ಇನ್ನೊಬ್ಬ ಐಪಿಎಸ್ ಅಧಿಕಾರಿ ಹೇಳಿದ್ದಾರೆ. ಮೊದಲು, ಉದ್ವಿಗ್ನತೆ ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಗಿತ್ತು. ಆದರೆ ಈಗ, ಸಾಮಾಜಿಕ ಮಾಧ್ಯಮದಿಂದಾಗಿ ಅದು ಇಡೀ ರಾಜ್ಯವನ್ನು ವ್ಯಾಪಿಸಿದೆ. ಆದಾಗ್ಯೂ ಇಂತಹ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳನ್ನು ಪೊಲೀಸರು ಮೇಲ್ವಿಚಾರಣೆ ಮಾಡುತ್ತಿದ್ದಾರೆ, ಅಗತ್ಯವಿರುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.