ಉಡುಪಿ: ಶಿಕಾರಿ ಉದ್ದೇಶ ದಿಂದ ಬಂದೂಕಿನಿಂದ ಗುಂಡು ಹಾರಿಸಿ ಕಾರು ಮತ್ತು ಮನೆ ಬಾಗಿಲಿಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಸೆ.10ರಂದು ಬಂಧಿಸಿದ್ದಾರೆ.
ಬಂಧಿತರನ್ನು ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32), ಹಾಗೂ ಹಿರಿಯಡ್ಕ ಗುಡ್ಡೆಯಂಗಡಿಯ ಮನೋಜ್ (25) ಎಂದು ಗುರುತಿಸಲಾಗಿದೆ
ಬಂಧಿತರಿಂದ 50 ಸಾವಿರ ರೂ. ಮೌಲ್ಯದ ಲೈಸನ್ಸ್ ಇಲ್ಲದ ತೋಟೆ ಕೋವಿ ,7 ತೋಟೆಗಳು ಹಾಗೂ 40 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇವರು ಸೆ. 1ರಂದು ನಸುಕಿನ ವೇಳೆ ಕಣಜಾರು ಗುರುರಾಜ್ ಮಂಜಿತ್ತಾಯರವರ ಮನೆಯ ಸಮೀಪದ ಹಾಡಿಯಲ್ಲಿ ಬೇಟೆಶಿಕಾರಿ ನಡೆಸುತ್ತಿದ್ದ ಅಪರಿಚಿತರ ಬಂದೂಕಿನಿಂದ ಗುಂಡು ಹಾರಿದ್ದು, ಆ ಗುಂಡು ಗುರುರಾಜ್ ಅವರ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜಿಗೆ ತಾಗಿ ನಂತರ ಮರದ ಬಾಗಿಲಿಗೆ ಬಡಿದಿತ್ತು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಷೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಕಾರ್ಯಾಚರಣೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಮಾರ್ಗದರ್ಶನದಲ್ಲಿ, ಉಪವಿಭಾಗದ ಡಿ.ವೈ.ಎಸ್.ಪಿ ಪ್ರಭು ಡಿ.ಟಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಗಳಾದ ಪುನೀತ್ ಕುಮಾರ್ ವಿಠಲ ಮಲವಾಡಕರ್ ಹಾಗೂ ಸಿಬಂದಿ ಪ್ರವೀಣ್ ರೈ, ಕೃಷ್ಣ, ಕಾರ್ತಿಕ್ ನಡೆಸಿದ್ದಾರೆ.