ಮಧುರೈ : ದಳಪತಿ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಜಯ್ ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ಬಹಿರಂಗ ಸಮಾವೇಶವನ್ನು ಆಗಸ್ಟ್ 21 ರಂದು ಮಧುರೈನಲ್ಲಿ ಆಯೋಜಿಸಿದ್ದರು. ಸಮಾವೇಶವು ಅದ್ಧೂರಿಯಾಗಿ, ಯಶಸ್ವಿಯಾಗಿ ನಡೆಯಿತು. ಆದರೆ ಇದೀಗ ಯುವಕನೊಬ್ಬ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ವಿಜಯ್ ಅವರು ಆಯೋಜಿಸಿದ್ದ ಬಹಿರಂಗ ರಾಜಕೀಯ ಸಮಾವೇಶಕ್ಕೆ ತಮಿಳುನಾಡಿನ ಹಲವು ಮೂಲೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಯುವಕರು, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ವೇದಿಕೆ ಮೇಲೆ ರ್ಯಾಂಪ್ ಒಂದನ್ನು ನಿರ್ಮಿಸಲಾಗಿತ್ತು. ಈ ರ್ಯಾಂಪ್ ಮೇಲೆ ನಡೆಯುವ ಮೂಲಕ ವಿಜಯ್ ಕಾರ್ಯಕ್ರಮವನ್ನು ಆರಂಭಿಸಿದರು.
ವಿಜಯ್, ರ್ಯಾಂಪ್ ವಾಕ್ ಆರಂಭಿಸುತ್ತಿದ್ದಂತೆ ಹಲವಾರು ಮಂದಿ ರ್ಯಾಂಪ್ ಮೇಲೆ ಹತ್ತಿ ವಿಜಯ್ ಬಳಿ ಆಗಮಿಸಲು ಯತ್ನಿಸಿದರು. ಆದರೆ ಬೌನ್ಸರ್ಗಳು ಅವರನ್ನು ತಡೆದಿದ್ದು, ಕೆಲವರನ್ನು ಎತ್ತಿ ರ್ಯಾಂಪ್ನಿಂದ ಕೆಳಕ್ಕೆ ಹಾಕಿದ್ದಾರೆ. ಈ ಘಟನೆಯ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದೀಗ ಸಮಾವೇಶದ ಬಳಿಕ ಶರತ್ಕುಮಾರ್ ಎಂಬ ಯುವಕನೊಬ್ಬ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಪೆರಂಬಲೂರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯ್ ಹಾಗೂ ಅವರ ಬೌನ್ಸರ್ಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದು ಇದರಿಂದಾಗಿ ತಮಗೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ. ತಮ್ಮ ತಾಯಿಯೊಟ್ಟಿಗೆ ಎಸ್ಪಿ ಕಚೇರಿಗೆ ಹೋಗಿ ದೂರು ದಾಖಲಿಸಿರುವ ಶರತ್ಕುಮಾರ್, ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.