ಚೆನ್ನೈ: ತಮಿಳುನಾಡಿನ ಕರೂರಿನ 8 ವರ್ಷದ ಹುಡುಗನೊಬ್ಬ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ನಿರ್ಧರಿಸಿದ್ದಾನೆ. ಅವನ ಈ ನಿಸ್ವಾರ್ಥ ಭಾವನೆ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ಹುಡುಗ ಕಳೆದ 10 ತಿಂಗಳುಗಳಿಂದ ತನ್ನ ಮನೆಯವರು ಕೊಟ್ಟ ಪಾಕೆಟ್ ಮನಿಯನ್ನು ಖರ್ಚು ಮಾಡದೇ ಹಾಗೇ ಕೂಡಿಟ್ಟಿದ್ದಾನಂತೆ. ಅವನ ಬಳಿ ಇರುವ ಹಣದ ಮೊತ್ತವು ಸಣ್ಣದಾಗಿದ್ದರೂ ಅದನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು ದೊಡ್ಡ ಗುಣವೇ ಸರಿ. ರಾಷ್ಟ್ರವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ತ್ಯಾಗಗಳ ಬಗ್ಗೆ ತಿಳಿದುಕೊಂಡ ನಂತರ ಭಾವುಕನಾಗಿ ಈ ಕೊಡುಗೆ ನೀಡುವ ಬಯಕೆಯನ್ನು ಆತ ವ್ಯಕ್ತಪಡಿಸಿದ್ದಾನಂತೆ.
ಈ ಹುಡುಗ ತಾನು ಕೂಡಿಟ್ಟ ಹಣದ ಡಬ್ಬಿಯನ್ನು ಹಿಡಿದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದಾನೆ. ಅವನ ಈ ನಡೆ ಜಿಲ್ಲಾಧಿಕಾರಿಗಳನ್ನೇ ಭಾವುಕರನ್ನಾಗಿ ಮಾಡಿದೆ ಮತ್ತು ಆ ಬಾಲಕನ ನಿಸ್ವಾರ್ಥತೆ ಮತ್ತು ಔದಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವನ ಈ ನಿಸ್ವಾರ್ಥ ಸೇವೆಯ ಬಗ್ಗೆ ಆತ ಮಾಧ್ಯಮದೊಂದಿಗೆ ಮಾತನಾಡಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೇಶಾದ್ಯಂತ ಜನರು ಅವನ ನಿಸ್ವಾರ್ಥ ಕಾರ್ಯಗಳನ್ನು ಹೊಗಳಿದ್ದಾರೆ. ಒಬ್ಬ ನೆಟ್ಟಿಗರು, “ಅವನು ತನ್ನ ಜೀವನದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಬೇಕೆಂದು ನಾನು ಬಯಸುತ್ತೇನೆ. ಸ್ಪೂರ್ತಿದಾಯಕ ಮಗು, ಮತ್ತು ಅದರ ಶ್ರೇಯಸ್ಸು ಅವನ ಹೆತ್ತವರಿಗೆ ಮತ್ತು ಇತರ ಎಲ್ಲ ಹಿರಿಯರಿಗೂ ಸಲ್ಲುತ್ತದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಎಂತಹ ಸ್ಪೂರ್ತಿದಾಯಕ ಬಾಲಕ! ದೇಶವು ಸುರಕ್ಷಿತ ಕೈಯಲ್ಲಿದೆ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿದೆ!” ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ 2018ರಲ್ಲಿ ಕೇರಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಭಾರೀ ನಷ್ಟವಾಗಿತ್ತು. ಹಾಗಾಗಿ ಕೇರಳದ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಲ್ಲಿ ಹಣದ ಅಗತ್ಯ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ವಿಲ್ಲುಪುರಂನ 2 ನೇ ತರಗತಿ ವಿದ್ಯಾರ್ಥಿನಿ ಅನುಪ್ರಿಯಾ (8) ತನ್ನ ಪಿಗ್ಗಿ ಬ್ಯಾಂಕ್ ಉಳಿತಾಯವನ್ನು ದಾನ ಮಾಡುವ ಮೂಲಕ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಳು. ಕಳೆದ ನಾಲ್ಕು ವರ್ಷಗಳಿಂದ ಅವಳು ಸೈಕಲ್ ಖರೀದಿಸಲು ತನ್ನ ಪಾಕೆಟ್ ಮನಿ ಉಳಿಸುತ್ತಿದ್ದಳು. ಪಿಗ್ಗಿ ಬ್ಯಾಂಕ್ನಲ್ಲಿ 9,000 ರೂ.ಇದ್ದಿತ್ತು. ಆದರೆ ಕೇರಳದಲ್ಲಿನ ಕಠೋರ ಪರಿಸ್ಥಿತಿಯನ್ನು ಕಂಡು ಮನನೊಂದ ಆಕೆ ಆ ಉಳಿತಾಯ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಳು.