ನವದೆಹಲಿ: ದೆಹಲಿಯಲ್ಲಿ ಹೊಸ ಬಿಜೆಪಿ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಈ ಅಧಿವೇಶನದಲ್ಲಿ ಶಾಸಕರು ಹಿಂದಿ, ಇಂಗ್ಲಿಷ್, ಸಂಸ್ಕೃತ, ಉರ್ದು, ಮರಾಠಿ ಮತ್ತು ಪಂಜಾಬಿ ಭಾಷೆ ಸೇರಿದಂತೆ 6 ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷಾ ವೈವಿಧ್ಯತೆಗೆ ಸಾಕ್ಷಿಯಾಯಿತು.
ಬಿಜೆಪಿ ನಾಯಕ ಅರ್ವಿಂದರ್ ಸಿಂಗ್ ಲವ್ಲಿ ಅವರು ೮ನೇ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರಿಗೆ ಲೆಫ್ಟಿನೆಂಟ್ ಸ್ಪೀಕರ್ ವಿ.ಕೆ. ಸಕ್ಸೆನಾ ಅವರು ಪ್ರಮಾಣ ವಚನ ಬೋಧಿಸಿದರು. ಮೊದಲಿಗೆ ಸಿಎಂ ರೇಖಾ ಗುಪ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಅವರ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಲೋಕೋಪಯೋಗಿ ಸಚಿವ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಮತ್ತು ಗೃಹ ಸಚಿವ ಆಶಿಶ್ ಸೂದ್ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪರಿಸರ ಸಚಿವ ಮನಿಜಿಂದರ್ ಸಿಂಗ್ ಸಿರ್ಸಾ ಅವರು ಪಂಜಾಬಿ ಭಾಷೆಯಲ್ಲಿ, ಕಾನೂನು ಮತ್ತು ನ್ಯಾಯ ಸಚಿವ ಕಪಿಲ್ ಮಿಶ್ರಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕ ಕರ್ನೈಲ್ ಸಿಂಗ್ ಪಂಜಾಬಿಯಲ್ಲಿ, ಪ್ರದ್ಯುಮ್ಸ್ ರಜಪೂತ್ ಮತ್ತು ನೀಲಂ ಪಹಲ್ವಾನ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಬಿಜೆಪಿಯ ತರ್ವಿಂದರ್ ಮರ್ವಾ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಧಾರ್ಮಿಕ ಘೋಷಣೆ ಕೂಗಿದ್ದು, ಇದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕರಾದ ಅಮಾನತುಲ್ಲಾ ಖಾನ್ ಉರ್ದುವಿನಲ್ಲಿ, ಚಂದನ್ ಚೌಧರಿ ಮೈಥಿಲಿ ಭಾಷೆಯಲ್ಲಿ, ಅಜಯ್ ದತ್ ಇಂಗ್ಲಿಷ್ನಲ್ಲಿ ಮತ್ತು ಗಜೇಂದ್ರ ಯಾದವ್, ಸಂಜಯ್ ಗೋಯೆಲ್, ಜಿತೇಂದ್ರ ಮಹಾಜನ್, ಅಜಯ್ ಮಹಾವಾರ್ ಮತ್ತು ಬಿಜೆಪಿಯ ಕರ್ನೈಲ್ ಸಿಂಗ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಶಾಸಕರು ವಿವಿಧ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.