ಸ್ನೇಹಿತನ ಜೊತೆ ಫೋಟೋ ಶೂಟ್ಗೆಂದು ತೆರಳಿದ್ದ ಯುವಕ ಕಾಲು ಜಾರಿ ಕಟ್ಟೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಹಾಸನ ತಾಲ್ಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ನಾಗೇಂದ್ರ (19) ಸಾವನ್ನಪ್ಪಿದ ಯುವಕ. ನಗರದ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ ಬೆಂಗಳೂರು ಮೂಲದ ಮಂಜುನಾಥ್ ಜೊತೆಗೆ ಮಧ್ಯಾಹ್ನ ಹಾಲುವಾಗಿಲು ಕಟ್ಟೆಗೆ ತೆರಳಿದ್ದರು, ಫೋಟೊ ಕ್ಲಿಕ್ಕಿಸಿಕೊಳ್ಳಲು ಕಟ್ಟೆಯ ಮಧ್ಯಭಾಗಕ್ಕೆ ತೆರಳಿದ್ದಾಗ ಕಟ್ಟೆಗೆ ಕಾಲು ಜಾರಿ ಬಿದಿದ್ದಾರೆ. ಸ್ನೇಹಿತನ ರಕ್ಷಣೆಗೆ ಮುಂದಾದ ಮಂಜುನಾಥ್ ಸಾಧ್ಯವಾಗದೆ ಮೀನಿನ ಬಲೆ ಹಿಡಿದು ಉಪಾಯದಿಂದ ದಡಕ್ಕೆ ಬಂದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ನೀರಿನ ಸುಳಿಗೆ ಸಿಲುಕಿದ ನಾಗೇಂದ್ರಗೆ ವಾಪಾಸ್ ಬರಲು ಸಾಧ್ಯವಾಗಿಲ್ಲ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ರಾತ್ರಿ ಆಗಿರುವುದರಿಂದ ಮೃತದೇಹಕ್ಕಾಗಿ ಸೋಮವಾರ ಬೆಳಗ್ಗೆ ಶೋಧಕಾರ್ಯ ನಡೆಸಲಿದ್ದಾರೆ. ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.