ಹೈದರಾಬಾದ್ : ಬುಡಕಟ್ಟು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ನಟ ವಿಜಯ್ ದೇವರಕೊಂಡ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ರೆಟ್ರೋ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಬುಡಕಟ್ಟು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ನೆನವತ್ ಅಶೋಕ್ ಕುಮಾರ್ ನಾಯಕ್ ದೂರು ದಾಖಲಿಸಿದ್ದಾರೆ. ಸೈಬರಾಬಾದ್ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿಜಯ್ ದೇವರಕೊಂಡ ಭಾಗಿ ಆಗಿದ್ದರು. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಡೆಯುತ್ತಿತ್ತು. ವೇದಿಕೆಯಲ್ಲಿ ಮಾತನಾಡುವಾಗ, ಪಾಕಿಸ್ತಾನದ ವರ್ತನೆಯನ್ನು ಬುಡಕಟ್ಟು ಸಂಘರ್ಷಕ್ಕೆ ವಿಜಯ್ ದೇವರಕೊಂಡ ಹೋಲಿಸಿದ್ದರು.
‘500 ವರ್ಷಗಳ ಹಿಂದೆ ಬುಡಕಟ್ಟು ಜನರು ಯುದ್ಧ ಮಾಡಿದ ರೀತಿಯಲ್ಲಿ ಪಾಕಿಸ್ತಾನಿಗಳು ವರ್ತಿಸುತ್ತಿದ್ದಾರೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದರು. ಈ ಹೇಳಿಕೆಯಿಂದ ಬುಡಕಟ್ಟು ಜನಾಂಗದ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಬುಡಕಟ್ಟು ಜನರನ್ನು ಪಾಕಿಸ್ತಾನದವರಿಗೆ ಹೋಲಿಸಿದ್ದರಿಂದ ವಿವಾದ ಸೃಷ್ಟಿ ಆಗಿದೆ ಎಂದು ಹೇಳಲಾಗಿದೆ.
ಮೇ 3 ರಂದು, ನಟ ಎಕ್ಸ್ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿ, ಯಾವುದೇ ಸಮುದಾಯವನ್ನು, ವಿಶೇಷವಾಗಿ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು. ಅವರನ್ನು ನಾನು ಆಳವಾಗಿ ಗೌರವಿಸುತ್ತೇನೆ ಮತ್ತು ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತೇನೆ.
ನನ್ನ ಸಂದೇಶದ ಯಾವುದೇ ಭಾಗವು ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಅಥವಾ ನೋವುಂಟುಮಾಡಿದ್ದರೆ, ನಾನು ನನ್ನ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸಿದೆ. ಶಾಂತಿ, ಪ್ರಗತಿ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವುದು ನನ್ನ ಏಕೈಕ ಗುರಿಯಾಗಿತ್ತು. ಒಗ್ಗಟ್ಟನ್ನು ಹೆಚ್ಚಿಸಲು – ಎಂದಿಗೂ ವಿಭಜಿಸದಿರಲು ನನ್ನ ವೇದಿಕೆಯನ್ನು ಬಳಸಲು ನಾನು ಬದ್ಧನಾಗಿರುತ್ತೇನೆ ಎಂದೂ ಹೇಳಿದ್ದರು.