ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ. ಇವರು 2004 ಏಪ್ರಿಲ್ 7ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಅಪಘಾತವಲ್ಲ ಕೊಲೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟಿ ಸೌಂದರ್ಯ ಅವರನ್ನು ಕೊಲೆ ಮಾಡಲಾಗಿದೆ ಎಂದು ಸ್ಟಾರ್ ನಟನ ವಿರುದ್ಧ ದೂರು ನೀಡಲಾಗಿದೆ.
ತೆಲುಗು ಚಿತ್ರರಂಗದ ದಿಗ್ಗಜ ನಟ ಮೋಹನ್ ಬಾಬು. ಇವರು ಸದಾ ಒಂದಲ್ಲ ಮತ್ತೊಂದು ವಿವಾದದಿಂದ ಸುದ್ದಿ ಆಗುತ್ತಲೇ ಇರ್ತಾರೆ. ಮೋಹನ್ ಬಾಬು ಮಕ್ಕಳ ಆಸ್ತಿ ವಿವಾದ ಬೀದಿಗೆ ಬಂದಿತ್ತು. ಸ್ವಂತ ಮಗನೇ ಮೋಹನ್ ಬಾಬು ವಿರುದ್ಧ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ನಟಿ ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದು ದೂರು ನೀಡಿದ್ದಾರೆ. ಈ ಕೇಸ್ ಮೋಹನ್ ಬಾಬುಗೆ ಸಂಕಷ್ಟ ತಂದೊಡ್ಡಿದೆ.
ತೆಲಂಗಾಣದ ಖಮ್ಮಂ ಜಿಲ್ಲೆ ಸತ್ಯನಾರಾಯಣಪುರ ಗ್ರಾಮದ ಎದುರುಗಟ್ಲ ಚಿಟ್ಟಿಬಾಬು ಎಂಬಾತ ನಟ ಮೋಹನ್ ಬಾಬು ವಿರುದ್ಧ ದೂರು ನೀಡಿದ್ದಾರೆ. ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದಿದ್ದಾರೆ. ಮೋಹನ್ ಬಾಬು ವಾಸವಿರೋ ಹೈದರಾಬಾದಿನ ಜಲಪಲ್ಲಿ ಬಳಿಯ ಟೌನ್ಶಿಪ್ ಸೌಂದರ್ಯಾ ಅವರಿಗೆ ಸೇರಿದ್ದು. ಕೂಡಲೇ ಮೋಹನ್ ಬಾಬು ಅವರನ್ನು ಖಾಲಿ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ಇಷ್ಟೇ ಅಲ್ಲ ಸೌಂದರ್ಯ ನಟಿಸಿದ ಕೊನೆಯ ಸಿನಿಮಾ ಶಿವ ಶಂಕರ. ಈ ಸಿನಿಮಾದ ನಾಯಕ ಮೋಹನ್ ಬಾಬು. ಅದೇ ಸಮಯದಲ್ಲಿ ಸೌಂದರ್ಯ ಜಲಪಲ್ಲಿ ಬಳಿ 6 ಎಕರೆ ಜಮೀನು ಖರೀದಿ ಮಾಡಿದ್ದರು. ಈ ವಿಷಯವನ್ನು ಮೋಹನ್ ಬಾಬು ಬಳಿ ಸೌಂದರ್ಯ ಹೇಳಿಕೊಂಡಿದ್ದರು. ಆಗ ಮೋಹನ್ ಬಾಬು ಸೌಂದರ್ಯ ಕಡೆಯಿಂದ ಆ ಜಮೀನು ಖರೀದಿ ಮಾಡಲು ಮುಂದಾದರು. ಅದಕ್ಕೆ ಸೌಂದರ್ಯ ಒಪ್ಪಲಿಲ್ಲ. ಹೀಗಾಗಿ ಮೋಹನ್ ಬಾಬು ಸೌಂದರ್ಯ ಅವರನ್ನು ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.