ನವದೆಹಲಿ: ದೆಹಲಿಯಲ್ಲಿ ವಾಯುಗುಣಮಟ್ಟವು ಕಳಪೆ ಮಟ್ಟಕ್ಕೆ ಕುಸಿಯುತ್ತಿದ್ದು, ಉಸಿರಾಡುವ ಗಾಳಿ ವಿಷವಾಗುತ್ತಿದೆ. ಜನರ ಶ್ವಾಸಕೋಶ, ಹೃದಯ ಹಾಗೂ ಮೆದುಳಿಗೆ ನಿರಂತರ ಹಾನಿಯುಂಟು ಮಾಡುತ್ತಿದೆ. ಹೀಗಾಗಿ ಶ್ವಾಸಕೋಶ ಸಮಸ್ಯೆ ಇರೋರು ಈ ಕೂಡಲೇ ದೆಹಲಿ ಬಿಟ್ಟು ಹೋಗಿ ಎಂದುAIIMS ಮಾಜಿ ನಿರ್ದೇಶಕ ಮತ್ತು ಶ್ವಾಸಕೋಶ ಶಾಸ್ತ್ರಜ್ಞ ಡಾ. ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ದೆಹಲಿ ಗುಣಮಟ್ಟವು ಅತ್ಯಂತ ಅಪಾಯ ಮಟ್ಟಕ್ಕೆ ತಲುಪುತ್ತಿದೆ. ಶ್ವಾಸಕೋಶ ದುರ್ಬಲ ಇರೋರು ಸಾಧ್ಯವಾದ್ರೆ ಕೂಡಲೇ ನಗರವನ್ನು ಬಿಟ್ಟು ಹೋಗಿ. ಒಂದು ವೇಳೆ ಇದು ಸಾಧ್ಯವಾಗಗಿದ್ದರೇ ಮಾಸ್ಕ್ ಧರಿಸುವುದು, ಮನೆಯಲ್ಲಿದ್ದರೇ ಏರ್ ಫಿಲ್ಟರ್ ಬಳಸುವುದು ಅಥವಾ ವೈದ್ಯರು ನೀಡಿದ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಸೂಚನೆ ನೀಡಿದ್ದಾರೆ.
“ದೆಹಲಿಯ ವಾಯು ಮಾಲಿನ್ಯವು ಸೈಲೆಂಟಾಗಿ ಜನರನ್ನ ಕೊಲ್ಲುತ್ತಿದೆ, ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಕವಾಗಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಉಸಿರಾಟ ಸಂಬಂಧಿತ ಕಾಯಿಲೆಗಳು, ತೀವ್ರ ಕೆಮ್ಮು, ಆಸ್ತಮಾ, ಸಿಒಪಿಡಿ ನಂತಹ ದೀರ್ಘಕಾಲಿಕ ಶ್ವಾಸಕೋಶ ಸಮಸ್ಯೆಗಳಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಲ್ಲಿ ಆತಂಕಕಾರಿ ಬೆಳವಣಿಗೆ ಏನಂದ್ರೆ ಯುವಜನರು ಉಸಿರಾಟ, ಅತಿಯಾದ ಕೆಮ್ಮಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

































