ಜಮ್ಮು ಮತ್ತು ಕಾಶ್ಮೀರ : ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಅಗತ್ಯ. ಇದೇ ರೀತಿ ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಂಬಿಕಾ ರೈನಾ ಅವರ ಸ್ಫೂರ್ತಿದಾಯಕ ಕತೆ ಇದು.
ಅಂಬಿಕಾ ರೈನಾ ಅವರು ಜಮ್ಮು ಮತ್ತು ಕಾಶ್ಮೀರದವರು. ಅವರ ತಂದೆ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ತಂದೆಯವರ ವರ್ಗಾವಣೆಗೊಳ್ಳುವ ಕೆಲಸದ ಕಾರಣ, ಅಂಬಿಕಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಹಲವೆಡೆ ಪೂರ್ಣಗೊಳಿಸಿದರು. ಬಾಲ್ಯದಿಂದಲೂ ಅಂಬಿಕಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಅಹಮದಾಬಾದ್ನ ಸಿಇಪಿಟಿ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪದಲ್ಲಿ ಪದವಿ ಗಳಿಸಿದರು.
ಪದವಿ ಮುಗಿದ ನಂತರ, ಅಂಬಿಕಾ ಇಂಟರ್ನ್ಶಿಪ್ ಗಾಗಿ ಸ್ವಿಟ್ಜರ್ಲೆಂಡ್ಗೆ ತೆರಳಿದರು. ಅಲ್ಲಿ ಅವರಿಗೆ ದೊಡ್ಡ ಕಂಪನಿಗಳಿಂದ ಅನೇಕ ಉದ್ಯೋಗಾವಕಾಶಗಳು ಅರಸಿಬಂದವು. ಈ ಸಮಯದಲ್ಲಿ ಅವರಿಗೆ ಸಿವಿಲ್ ಸೇವೆಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು.
ನಂತರ ಅಂಬಿಕಾ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಭಾರತಕ್ಕೆ ಮರಳಿದರು. ಮೊದಲು ಎರಡು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ 2022 ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 164 ನೇ ಅಖಿಲ ಭಾರತ ರ್ಯಾಂಕ್ ಗಳಿಸಿದರು. ಬಳಿಕ ಅವರು ಇಂಡಿಯನ್ ಆಡಿಟ್ ಮತ್ತು ಅಕೌಂಟ್ಸ್ ಸರ್ವೀಸ್ (ಐಎಎಎಸ್) ಅಧಿಕಾರಿಯಾಗಿ ಆಯ್ಕೆಯಾದರು.