ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರಿಗೆ ದೇಶದ ತೃತೀಯ ನಾಗರಿಕ ಅತ್ಯುನ್ನತ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ನಟ ಅನಂತನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸಿನಿ ಜಗತ್ತಿನ ಕಲಾ ಕ್ಷೇತ್ರದಲ್ಲಿ ಅನಂತನಾಗ್ ಅವರ ಮಹಾನ್ ಸಾಧನೆಗೆ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಅನಂತನಾಗ್ ಅವರು 1948ರ ಸೆ.4ರಂದು ಉತ್ತರ ಕನ್ನಡದ ಶಿರಳ್ಳಿ ಗ್ರಾಮದಲ್ಲಿ ಜನಿಸಿದರು. 1973ರ ಸಂಕಲ್ಪ ಸಿನಿಮಾದಿಂದ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಪ್ರವೇಶಿಸಿದರು. ಕನ್ನಡದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ‘ನಾ ನಿನ್ನ ಬಿಡಲಾರೆ’, ‘ಬಯಲುದಾರಿ’, ‘ಅಂಕುರ್’ ಮೂವಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅನಂತ್ ನಾಗ್ ಅವರು ಅಭಿನಯ ಮಾಡಿ ಯಶಸ್ಸು ಕಂಡುಕೊಂಡರು.
ಬಯಲು ದಾರಿ (1976), ಕನ್ನೇಶ್ವರ ರಾಮ (1977), ಚಂದನದ ಗೊಂಬೆ (1979), ಬೆಂಕಿಯ ಬಾಲೆ (1983), ಹೆಂಡ್ತಿಗೆ ಹೇಳಬೇಡಿ (1989), ಗಣೇಶನ 09 ಮದುವೆ, ಗಂಡು (2006), ಗೋಧಿ ಬಣ್ಣ ಸಾಧಾರಣ ಮೈಕಟ್ಟು (2016), ರಾಜಕುಮಾರ (2017), ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, ಕೆಜಿಎಫ್: ಅಧ್ಯಾಯ 1 (2018), ಕೆಜಿಎಫ್: ಅಧ್ಯಾಯ 2 (2022) ಹಾಗೂ ಗಾಳಿಪಟ 2 (2022) ಸಿನಿಮಾ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ಅನಂತನಾಗ್ ಅವರ ಅಭಿನಯಿಸಿದ್ದರು.
2025ರ ಜನವರಿ 25 ರಂದು ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ 7 ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇದರ ಜೊತೆಗೆ 19 ಪದ್ಮಭೂಷಣ, 113 ಪದ್ಮಶ್ರೀ ಪ್ರಶಸ್ತಿಗಳನ್ನು ಅನೌನ್ಸ್ ಮಾಡಿತ್ತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.