ನವದೆಹಲಿ :2026ರ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ʻಅಶೋಕ ಚಕ್ರʼವನ್ನ ಪ್ರದಾನ ಮಾಡಿದರು.
ಬಾಹ್ಯಾಕಾಶದಲ್ಲಿ ಭಾರತದ ಪತಾಕೆ ಹಾರಿಸಿದಂತಹ ಮಹತ್ತರ ಕೀರ್ತಿ ಶುಭಾಂಶು ಅವರಿಗೆ ಸಲ್ಲುತ್ತದೆ. ಈ ಅನನ್ಯ ಸಾಧನೆ ಮತ್ತು ಧೈರ್ಯಕ್ಕಾಗಿ ʻಅಶೋಕ ಚಕ್ರʼ ಶ್ರೇಷ್ಠ ಗೌರವವನ್ನ ನೀಡಲಾಗಿದೆ. ಈ ಪ್ರಶಸ್ತಿಯು ಶುಕ್ಲಾ ಅವರು ರಾಷ್ಟ್ರಕ್ಕಾಗಿ ನೀಡಿದ ಅಪ್ರತಿಮ ಕೊಡುಗೆಯನ್ನ ಸ್ಮರಿಸುತ್ತದೆ.
ಅಶೋಕ ಚಕ್ರವು ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಯುದ್ಧಭೂಮಿಯ ಹೊರಗೆ ತೋರುವ ಅದ್ಭುತ ಸಾಹಸ, ಆತ್ಮತ್ಯಾಗ ಅಥವಾ ಧೈರ್ಯಕ್ಕಾಗಿ ಸೈನಿಕರು ಮತ್ತು ನಾಗರಿಕರಿಗೆ ನೀಡಲಾಗುತ್ತದೆ. ಇದು ಇದು ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ʻಪರಮವೀರ ಚಕ್ರʼಕ್ಕೆ ಸಮಾನವಾಗಿದೆ.
ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ 2025 ರ ಜೂನ್ 25 ರಂದು ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಾಲ್ವರು ಗಗನಯಾತ್ರಿಗಳಲ್ಲಿ ಶುಕ್ಲಾ ಕೂಡ ಒಬ್ಬರಾಗಿದ್ದರು. ಐಎಸ್ಎಸ್ನಲ್ಲಿ ಸುಮಾರು 18 ದಿನಗಳನ್ನ ಕಳೆದ ನಂತರ ಅವರು ಜುಲೈ 15 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು. ಕಳೆದ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿ ಶುಕ್ಲಾ ಇತರ ವಿಜ್ಞಾನಿಗಳೊಂದಿಗೆ 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನ ನಡೆಸಿದ್ದರು. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ.

































