ಇಂಫಾಲ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಉಂಟಾಗಿರುವ ನಡುವೆಯೇ ಭಾರತೀಯ ನೌಕಾಪಡೆಯು ತಾನು ಆರಬ್ಬಿ ಸಮುದ್ರದಲ್ಲಿ ಹಡಗು ವಿಧ್ವಂಸಕ ಕ್ಷಿಪಣಿಗಳನ್ನು ಪರೀಕ್ಷಿಸಿದ ದೃಶ್ಯಾವಳಿಗಳನ್ನು ರವಿವಾರ ಪ್ರಸಾರ ಮಾಡಿದೆ. ಆ ಮೂಲಕ ಅದು ಯಾವುದೇ ಸಮರ ಸನ್ನದ್ಧವಾಗಿರುವುದನ್ನು ದೃಢಪಡಿಸಿದೆ.
ಭಾರತೀಯ ನೌಕಾಪಡೆಯು ಬ್ರಹ್ಮೋಸ್ ಹಡಗು ವಿಧ್ವಂಸಕ ಹಾಗೂ ಮೇಲ್ಮೈನಲ್ಲಿರುವ ಗುರಿಗಳನ್ನು ನಾಶಪಡಿಸುವ ಕ್ರೂಸ್ ಕ್ಷಿಪಣಿಗಳ ಪರೀಕ್ಷೆಯ ದೃಶ್ಯಾವಳಿಗಳನ್ನು ನೌಕಾಪಡೆ ಹಂಚಿಕೊಂಡಿದೆ. ‘ಕೋಲ್ಕತಾ ಕ್ಲಾಸ್ ಡಿಸ್ಟ್ರಾಯರ್’ , ‘ನೀಲಗಿರಿ’ ಮತ್ತು ‘ಕ್ರಿವಾಕ್’ ದರ್ಜೆಯ ಕ್ಷಿಪಣಿಗಳನ್ನು ಉಡಾವಣೆ ಗೊಳಿಸಿದ ದೃಶ್ಯಾವಳಿಗಳನ್ನು ಕೂಡಾ ಅದು ಪ್ರದರ್ಶಿಸಿದೆ.
ಪಾಕಿಸ್ತಾನವು ನೂತನ ಕ್ಷಿಪಣಿಯ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆಯೆಂಬ ವರದಿಗಳ ನಡುವೆಯೇ ಆ ದೇಶವು ಆರಬ್ಬಿ ಸಮುದ್ರದಲ್ಲಿ ತನ್ನ ವ್ಯಾಪ್ತಿಯ ಬರುವ ಪ್ರದೇಶವನ್ನು ಹಾರಾಟ ನಿಷೇಧ ವಲಯವಾಗಿ ಘೋಷಿಸಿದೆ.
ಭಾರತೀಯ ನೌಕಾಪಡೆಯ ಹಡಗುಗಳು ದೀರ್ಘವ್ಯಾಪ್ತಿಯ ನಿಖರ ಆಕ್ರಮಣಾತ್ಮಕ ದಾಳಿಗಳಿಗಾಗಿ ತನ್ನ ವೇದಿಕೆಗಳು, ವ್ಯವಸ್ಥೆಗಳು ಹಾಗೂ ಸಿಬ್ಬಂದಿ ಸನ್ನದ್ಧವಾಗಿರುವುದನ್ನು ಪ್ರದರ್ಶಿಸಲು ಭಾರತೀಯ ನೌಕಾಪಡೆಯ ಹಡಗುಗಳು ಯಶಸ್ವಿಯಾಗಿ ವಿವಿಧ ಹಡಗು ವಿಧ್ವಂಸಕ ಕ್ಷಿಪಣಿಗಳ ಉಡಾವಣೆಯನ್ನು ನಡೆಸಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
ಭಾರತೀಯ ನೌಕಾಪಡೆಯು ಯುದ್ಧ ಸನ್ನದ್ಧವಾಗಿವೆ, ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ, ಯಾವುದೇ ರೀತಿಯಲ್ಲಿ ಭಾರತೀಯ ಸಾಗರ ಪ್ರದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿವೆ’’ ಎಂದು ಭಾರತೀಯ ನೌಕಾಪಡೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಂವ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಭಾರತೀಯ ನೌಕಾಪಡೆ ತನ್ನ ಸಮರ ಸನ್ನದ್ಧತೆಯನ್ನು ಬಹಿರಂಗವಾಗಿ ಘೋಷಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆಯೆಂದು ಭಾರತ ಸರಕಾರ ಆಪಾದಿಸಿದೆ.