ಚೆನ್ನೈ: ಬಾವಲಿಗಳ ಮಾಂಸವನ್ನು ಬೇಯಿಸಿ ಪದಾರ್ಥ ತಯಾರಿಸಿ ಅದನ್ನು ಕೋಳಿ ಮಾಂಸ ಎಂದು ಮಾರಾಟ ಮಾಡಿ ಜನರ ತಲೆಗೆ ಟೋಪಿ ಹಾಕುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಮಲ್ ಮತ್ತು ಸೆಲ್ವಂ ಎಂದು ಗುರುತಿಸಲಾಗಿದೆ.
ತಮಿಳುನಾಡಿನ ತೋಪ್ಪುರ್ ರಾಮಸಾಮಿ ಅರಣ್ಯ ಪ್ರದೇಶದಲ್ಲಿ ದಿನಂಪ್ರತಿ ಗುಂಡಿನ ಸದ್ದು ಕೇಳುತ್ತಿತ್ತು ಆದರೆ ಈ ವಿಚಾರದ ಬಗ್ಗೆ ಜನರು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ, ಇತ್ತ ಅಲ್ಲಿನ ಸ್ಥಳೀಯ ನಿವಾಸಿಗಳಾದ ಕಮಲ್ ಹಾಗೂ ಸೆಲ್ವಂ ಎಂಬ ಇಬ್ಬರು ಮನೆಯಲ್ಲೇ ಚಿಕನ್ ಸುಕ್ಕ, ಚಿಕನ್ ಚಿಲ್ಲಿ ಪದಾರ್ಥಗಳನ್ನು ತಯಾರಿಸಿ ನಗರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು.
ಅರಣ್ಯ ಪ್ರದೇಶದಲ್ಲಿ ಕೇಳಿ ಬರುತ್ತಿದ್ದ ಗುಂಡಿನ ಸದ್ದಿನ ಬಗ್ಗೆ ಅದೇ ಗ್ರಾಮದ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸರು ಈ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮುಟ್ಟಿಸಿದ್ದಾರೆ. ಅದರಂತೆ ಒಂದು ದಿನ ಕಾಡಿನಲ್ಲಿ ಅಧಿಕಾರಿಗಳು ಕಾದು ಕುಳಿತ್ತಿದ್ದು ಈ ವೇಳೆ ಇಬ್ಬರು ಕಾಡಿನಲ್ಲಿರುವ ಬಾವಲಿಗಳನ್ನು ಗುಂಡಿಕ್ಕಿ ಬೇಟೆಯಾಡುವುದು ಗಮನಕ್ಕೆ ಬಂದಿದೆ ಕೂಡಲೇ ಅವರಿಬ್ಬರನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ಭಯಾನಕ ಸತ್ಯ ಬಾಯ್ದಿಟ್ಟಿದ್ದಾರೆ.
ಕೋಳಿ ಮಾಂಸ ಎಂದು ಬಾವಲಿ ಮಾಂಸ ಮಾರಾಟ:
ಪೊಲೀಸರ ತನಿಖೆ ವೇಳೆ ಈ ಇಬ್ಬರು ವ್ಯಕ್ತಿಗಳು ತಾವು ದಿನ ತೋಪ್ಪುರ್ ರಾಮಸಾಮಿ ಅರಣ್ಯ ಪ್ರದೇಶದಲ್ಲಿ ಬಾವಲಿಗಳನ್ನು ಬೇಟೆಯಾಡಿ ಅದರ ಮಾಂಸದಿಂದ ಸುಕ್ಕ, ಚಿಲ್ಲಿ ತಯಾರಿಸಿ ಅದನ್ನು ನಗರ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಚಿಕನ್ ಸುಕ್ಕ, ಚಿಕನ್ ಚಿಲ್ಲಿ ಎಂದು ಹೇಳಿ ಮಾರಾಟ ಮಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳೇ ದಂಗಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಮಲ್ ಹಾಗೂ ಸೆಲ್ವಂ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.