BBK: ದೊಡ್ಮನೆಗೆ ಮತ್ತೆ ಬಂತು ಚಿನ್ನದ ಹುಲಿ ಉಗುರು? ಯಾರು ಈ ಗೋಲ್ಡ್ ಸುರೇಶ್‌ ಗೊತ್ತಾ?

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಓಪನಿಂಗ್‌ಗೆ ಇನ್ನೊಂದು ದಿನ ಬಾಕಿಯಿದೆ. ಅದಕ್ಕೂ ಮುನ್ನ ಕೆಲ ಸ್ಪರ್ಧಿಗಳ ಹೆಸರು ಬಹಿರಂಗವಾಗಿದೆ. ಈ ಬಾರಿ ಅಚ್ಚರಿಯ ಅಭ್ಯರ್ಥಿಗಳು ಭಾರಿ ಸದ್ದು ಮಾಡುತ್ತಿದ್ದಾರೆ. ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್ ಹಾಗೂ ಹಿಂದೂ ಕಾರ್ಯಕರ್ತೆ ಎಂದು ಹೆಸರಾಗಿದ್ದ ಚೈತ್ರಾ ಕುಂದಾಪುರ್ ಅವರು ಮೊದಲ ಮೂರು ಸ್ಪರ್ಧಿಗಳಾಗಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಇದೀಗ ನಾಲ್ಕನೇ ಸ್ಪರ್ಧಿಯನ್ನು ಘೋಷಣೆ ಮಾಡಲಾಗಿದ್ದು, ಯಾರೂ ಊಹಿಸದ ಅಚ್ಚರಿಯ ಹೆಸರನ್ನು ಆಯೋಜಕರು ಘೋಷಣೆ ಮಾಡಿದ್ದಾರೆ. ಹೌದು. ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಹೋಲುವ ಗೋಲ್ಡ್ ಸುರೇಶ್ ಈ ಬಾರಿ ದೊಡ್ಮನೆಗೆ ಕಾಲಿಡುತ್ತಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿದ ಸುರೇಶ್ ಮುಂದೆ ಬೆಂಗಳೂರಿಗೆ ಬಂದು ಸಾಧಕರಪಟ್ಟಿ ಸ್ಥಾನ ಪಡೆದಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಳಿಕ ಕೆಲಸ ಬಿಟ್ಟು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪಿಸಿ ಗೆದ್ದರು. ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹುಟ್ಟಿದ ಊರು ಬಿಟ್ಟು ಓಡಿ ಬಂದ ಸುರೇಶ್ ಮುಂದೆ ತಮ್ಮದೇ ಸಂಸ್ಥೆ ಸ್ಥಾಪಿಸಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇತ್ತೀಚೆಗೆ ಜೀ ನ್ಯೂಸ್ ಯುವರತ್ನ ಅವಾರ್ಡ್ ಕೂಡ ಪಡೆದಿದ್ದರು. ಸದಾ ಮೈಮೇಲೆ ಚಿನ್ನ ಹಾಕಿಕೊಂಡು ಸುರೇಶ್ ಓಡಾಡುತ್ತಾರೆ. ಕುತ್ತಿಗೆಯಲ್ಲಿ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಉಂಗುರಗಳು ಹೀಗೆ ಚಿನ್ನ ಅಂದ್ರೆ ಬಹಳ ಅಚ್ಚುಮೆಚ್ಚು. ಅದೇ ಕಾರಣಕ್ಕೋ ಏನೋ ಅವರನ್ನು ಗೋಲ್ಡ್ ಸುರೇಶ್ ಎಂದೇ ಕೆಲವರು ಕರೆಯುತ್ತಾರೆ. ಚಿಕ್ಕಂದಿನಿಂದಲೂ ಕಾರು ಹಾಗೂ ಚಿನ್ನದ ಬಗ್ಗೆ ಅಪಾರ ಒಲವು ಇರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಂದಾಜು 2 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅವರು ಧರಿಸಿ ಓಡಾಡುತ್ತಾರೆ ಎನ್ನುವ ಅಂದಾಜಿದೆ. ನಮ್ಮ ಪತ್ನಿ ಚೆನ್ನಾಗಿ ಓದಿದ್ದಾರೆ, ನಾನು ಅಷ್ಟಾಗಿ ಓದಿಲ್ಲ, ನಾನು ಚಿನ್ನ ಧರಿಸಿ ಓಡಾಡುವುದು, ದುಬಾರಿ ಕಾರ್ ಕೊಂಡುಕೊಳ್ಳುವುದು ಆಕೆಗೆ ಇಷ್ಟವಾಗಲ್ಲ ಎಂದಿದ್ದಾರೆ. ಹೆಣ್ಣು ಮಗು ಬೇಕು ಎಂದು ಬಯಸಿದ್ದೆ. ಮಗಳು ಹುಟ್ಟಿದಳು ಎಂದು ಗೋಲ್ಡ್ ಸುರೇಶ್ ಹೇಳಿಕೊಂಡಿದ್ದಾರೆ. ನಾವೆಲ್ಲಾ ಬಿಗ್‌ಬಾಸ್ ಮನೆಗೆ ಹೋಗುವುದು ಸಾಧ್ಯನಾ? ಎಂದುಕೊಂಡಿದ್ದೆ. ಈಗ ಅವಕಾಶ ಸಿಕ್ಕಿದೆ. ನಮ್ಮತನ ತೋರಿಸಬೇಕು ಎಂದು ಅವರು ಹೇಳಿರುವುದು ಪ್ರೋಮೊದಲ್ಲಿ ನೋಡಬಹುದು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement