ಛತ್ರಪತಿ ಶಂಭಾಜಿ ನಗರ: ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಆ ದೇಶದ ಗುಪ್ತಚರ ಸಂಸ್ಥೆ ಐಎಸ್ಐ ಆಗಿರಲಿ, ಭಯೋತ್ಪಾದಕ ಸಂಘಟನೆ ಐಸಿಸ್ ಆಗಿರಲಿ ಅಥವಾ ಇತರ ಪಾಕಿಸ್ತಾನಿ ಉಗ್ರ ಸಂಘಟನೆಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಜಗಳ ನಡೆಯುವುದನ್ನು ನೋಡಲು ಬಯಸುತ್ತಿವೆ. ಅದಕ್ಕಾಗಿಯೇ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ ಎಂದು ಸೋಮವಾರ ಹೇಳಿದರು.
ಇಂದು ಮಹಾರಾಷ್ಟ್ರದ ಛತ್ರಪತಿ ಶಂಭಾಜಿ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, “ನನ್ನ ಬೇಡಿಕೆಯೆಂದರೆ, ಪಾಕಿಸ್ತಾನವನ್ನು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(FATF), ಬೂದು ಪಟ್ಟಿಗೆ ಸೇರಿಸುವ ಅಗತ್ಯ ಇದೆ. ಅವರು ಅಕ್ರಮ ಹಣದಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದ್ದಾರೆ. ಆದ್ದರಿಂದ ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಬೇಕು ನಾವು ಮೋದಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಪಹಲ್ಗಾಮ್ ದಾಳಿಯ ನಂತರ ಬಿಲಾವಲ್ ಭುಟ್ಟೋ ಜರ್ದಾರಿ ಅವರು, ಸಿಂಧೂ ನದಿ ನೀರು ನಿಲ್ಲಿಸಿದರೆ ‘ರಕ್ತ ಹರಿಯುತ್ತದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, “ಬಚ್ಪಾನೆ ಕಿ ಬಾತೇ ನಹಿ ಕರ್ನಾ (ಚೈಲ್ಡಿಶ್ ಹೇಳಿಕೆ ನೀಡಬೇಡಿ). ಅವರ ತಾಯಿಯನ್ನು ಅಲ್ಲಿನ ಸ್ಥಳೀಯ ಭಯೋತ್ಪಾದಕರೇ ಕೊಂದರು. ಅವರು ಏನು ಹೇಳುತ್ತಿದ್ದಾರೆಂದು ಅವರಿಗೆ ಗೊತ್ತಿದೆಯೇ?” ಎಂದು ಪ್ರಶ್ನಿಸಿದರು.
ಅವರು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಭಾರತದ ಏಕತೆಯನ್ನು ದುರ್ಬಲಗೊಳಿಸಲು ಬಯಸುತ್ತಿದ್ದಾರೆ. “ನಿಮ್ಮ ಸ್ವಂತ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು, ಆದರೆ ಈ ಏಕತೆಯನ್ನು ದುರ್ಬಲಗೊಳಿಸಲು ಬಯಸುವ ಜನರನ್ನು ಗೆಲ್ಲಲು ಬಿಡಬೇಡಿ, ಈ ರಾಷ್ಟ್ರವನ್ನು ದುರ್ಬಲಗೊಳಿಸಬೇಡಿ” ಎಂದು ಓವೈಸಿ ಹೇಳಿದರು.
ಇದಕ್ಕು ಮುನ್ನ “ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಲು ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಆದರೆ ಪಾಕಿಸ್ತಾನ ಒಂದಲ್ಲ ಒಂದು ದಿನ ತನ್ನ ಕುತಂತ್ರಗಳಿಗೆ ತಕ್ಕೆ ಬೆಲೆ ತೆರಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಕ್ರಮ ಕೈಗೊಳ್ಳಬೇಕು” ಎಂದು ಹೈದರಾಬಾದ್ ಸಂಸದ ಹೇಳಿದ್ದರು.
“ಪಾಕಿಸ್ತಾನ ಪದೇ ಪದೇ ತಮ್ಮಲ್ಲಿ ಪರಮಾಣು ಬಾಂಬ್ಗಳಿವೆ, ಅಣು ಬಾಂಬ್ಗಳಿವೆ ಎಂದು ಹೇಳುತ್ತದೆ. ನೆನಪಿಡಿ, ನೀವು ಇನ್ನೊಂದು ದೇಶಕ್ಕೆ ಹೋಗಿ ಮುಗ್ಧ ಜನರನ್ನು ಕೊಂದರೆ, ಯಾವುದೇ ದೇಶ ಸುಮ್ಮನಿರುವುದಿಲ್ಲ” ಎಂದು ಅಸಾದುದ್ದೀನ್ ಓವೈಸಿ ಎಚ್ಚರಿಸಿದರು.
“ನೀವು ಕೇವಲ ಅರ್ಧ ಗಂಟೆ ಹಿಂದಿಲ್ಲ, ನೀವು ಭಾರತಕ್ಕಿಂತ ಅರ್ಧ ಶತಮಾನ ಹಿಂದಿದ್ದೀರಿ. ನಿಮ್ಮ ದೇಶದ ಬಜೆಟ್ ನಮ್ಮ ಮಿಲಿಟರಿ ಬಜೆಟ್ಗೆ ಸಮನಾಗಿರುವುದಿಲ್ಲ” ಎಂದು ಅಸಾದುದ್ದೀನ್ ಓವೈಸಿ ಪಾಕಿಸ್ತಾನದ ವಿರುದ್ಧ ಗುಡುಗಿದರು.