ಕೋಟ್ಯಾಧಿಪತಿ ದಿನೇಶ್ 555ಬೀಡಿ ಮಾಲೀಕನನ್ನು ಅವರ ಮಗನೇ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಶುಕ್ರವಾರ ರಾತ್ರಿ ಮಥುರಾದ ವೃಂದಾವನದಲ್ಲಿ ನಡೆದಿದೆ.
ರಾತ್ರಿ ವೇಳೆ ನಡೆದ ಅಪ್ಪಮಗನ ಗಲಾಟೆಯಲ್ಲಿ ಮಗ ಅಪ್ಪನ ಮೇಲೆ ಗುಂಡು ಹಾರಿಸಿಕೊಲೆ ಮಾಡಿ ಬಳಿಕ ಅದೇ ಪಿಸ್ತೂಲ್ ನಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರನ್ನು ಸುರೇಶ್ ಚಂದ್ರ ಅಗರ್ವಾಲ್ (75), ಮತ್ತು ಅವರ ಮಗ ನರೇಶ್ ಅಗರ್ವಾಲ್ (50) ಎಂದು ಗುರುತಿಸಲಾಗಿದೆ.
ಸುರೇಶ್ ಚಂದ್ರ ಅಗರ್ವಾಲ್ (75), ದಿನೇಶ್ ಬೀಡಿ ಮತ್ತು 555 ಬೀಡಿ ಎಂಬ ಎರಡು ಪ್ರಸಿದ್ಧ ತಂಬಾಕು ಬ್ರಾಂಡ್ಗಳ ಮಾಲೀಕ. ಪೊಲೀಸ್ ತನಿಖೆಯಲ್ಲಿ ಸುರೇಶ್ ಚಂದ್ರ ಅವರ ಮಗ ನರೇಶ್ ದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು, ಇದರಿಂದಾಗಿ ರೋಸಿ ಹೋಗಿದ್ದ ಸುರೇಶ್ ಚಂದ್ರ ಅವರು ಮಗನಿಗೆ ಗದರಿಸುತ್ತಿದ್ದರು. ಅದೇ ರೀತಿ ಶುಕ್ರವಾರ ರಾತ್ರಿ, ನರೇಶ್ ಮತ್ತೆ ಮನೆಯಲ್ಲಿ ಕುಡಿಯಲು ಪ್ರಾರಂಭಿಸಿದಾಗ, ಅವರ ತಂದೆ ಅವರನ್ನು ತಡೆದರು.
ಈ ವೇಳೆ ಅಪ್ಪ ಮತ್ತು ಮಗನ ನಡುವೆ ಗಲಾಟೆ ಪ್ರಾರಂಭವಾಗಿದೆ. ಈ ವೇಳೆ ಕೋಪದಿಂದ ನರೇಶ್ ತನ್ನ ಪರವಾನಗಿ ಪಡೆದ .32 ಬೋರ್ ಪಿಸ್ತೂಲನ್ನು ಹೊರತೆಗೆದು ತನ್ನ ತಂದೆಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಗುಂಡು ಸುರೇಶ್ ಅವರ ಎದೆಗೆ ತಗುಲಿ ತಕ್ಷಣವೇ ಅವರು ಸಾವನಪ್ಪಿದ್ದಾರೆ. ಬಳಿಕ ತಾನು ಮಾಡಿದ್ದನ್ನು ಅರಿತುಕೊಂಡ ನರೇಶ್ ಗಾಬರಿಗೊಂಡು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿದ ನಂತರ ಕುಟುಂಬ ಸದಸ್ಯರು ಕೋಣೆಗೆ ಧಾವಿಸಿ ಬಂದಾಗ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡರು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಗೌರಾ ನಗರ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಸುರೇಶ್ ಚಂದ್ರ ಅಗರ್ವಾಲ್ ಬೀಡಿ ವ್ಯಾಪಾರದಲ್ಲಿ ಪ್ರಸಿದ್ಧ ಹೆಸರಾಗಿದ್ದರು.
ಅವರು ತಮ್ಮ ಹಿರಿಯ ಮಗ ದಿನೇಶ್ ಹೆಸರಿನಲ್ಲಿ ವ್ಯವಹಾರವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಅದನ್ನು ಹಲವಾರು ರಾಜ್ಯಗಳಿಗೆ ವಿಸ್ತರಿಸಿದರು. ಕುಟುಂಬದ 555 ಬೀಡಿ ಬ್ರ್ಯಾಂಡ್ ಹೆಚ್ಚು ಜನಪ್ರಿಯವಾಯಿತು. ವ್ಯವಹಾರವು ಈಗ ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದೆ. ಸುರೇಶ್ ತಮ್ಮ ಇಬ್ಬರು ಕಿರಿಯ ಪುತ್ರರಾದ ನರೇಶ್ ಮತ್ತು ಮಹೇಶ್ ಮತ್ತು ಅವರ ಕುಟುಂಬಗಳೊಂದಿಗೆ ವೃಂದಾವನದಲ್ಲಿ ವಾಸಿಸುತ್ತಿದ್ದರು. ದಿನೇಶ್ ಕೋಲ್ಕತ್ತಾದಲ್ಲಿ ಕಂಪನಿಯ ಕಾರ್ಯಾಚರಣೆಗಳನ್ನು ನಿರ್ವಹಿಸಿದರೆ, ನರೇಶ್ ಮತ್ತು ಮಹೇಶ್ ವೃಂದಾವನದಲ್ಲಿ ವ್ಯವಹಾರವನ್ನು ನಿರ್ವಹಿಸುತ್ತಾರೆ. ಕುಟುಂಬವು ಮಥುರಾ-ವೃಂದಾವನ ಮತ್ತು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಆಸ್ತಿಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ ಶತಕೋಟಿಗಳಷ್ಟಿದೆ ಎಂದು ಹೇಳಲಾಗುತ್ತದೆ.

































