ಚಿತ್ರದುರ್ಗ: ಜಗತ್ತಿನ ಎಲ್ಲಾ ತತ್ವ, ಸಿದ್ಧಾಂತಗಳ ಪ್ರಕಾರ ಇಡೀ ವಿಶ್ವದಲ್ಲಿ ಬಹಳ ದಟ್ಟವಾದ ಪ್ರಭಾವ ಬೀರಿರುವ ವ್ಯಕ್ತಿ ಬುದ್ಧ ಎಂದು ಚಿಂತಕ, ನವಯಾನ ಬುದ್ಧ ದಮ್ಮ ಸಂಘದ ಪ್ರೊ. ಸಿ.ಕೆ.ಮಹೇಶ್ ಹೇಳಿದರು.
ನಗರದ ಸ್ಟೇಡಿಯಂ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಬುದ್ಧರ ಜಯಂತಿ ಆಚರಣೆ ಸಮಾರಂಭದಲ್ಲಿ ಬುದ್ಧರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಜಗತ್ತಿನ ಖಂಡಗಳ ಕಾಲಘಟ್ಟದಲ್ಲಿ ತುಂಬಾ ದೊಡ್ಡದಾಗಿ ಪ್ರಚಾರವಾಗಿದ್ದು ಬುದ್ಧ ದಮ್ಮ. ಇಡೀ ಜಗತ್ತಿನಲ್ಲಿ ಯಾವುದೇ ಧರ್ಮ, ತತ್ವ, ಸಿದ್ದಾಂತಗಳಿರಬಹುದು. 2,600 ವರ್ಷಗಳ ಹಿಂದೆ ಉದಯಿಸಿದ ಬುದ್ಧನಿಂದಲೇ ಎಲ್ಲವೂ ನಡೆಯುತ್ತಿರುವುದು ಎಂದು ಅಭಿಪ್ರಾಯಪಟ್ಟರು.
ಜಗತ್ತಿನಲ್ಲಿ ಬುದ್ಧ ಪ್ರಭಾವ ಬೀರಿರುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾವಿರಾರು ಲೇಖನ, ಪುಸ್ತಕಗಳು ಬಂದಿವೆ. 2,600 ವರ್ಷಗಳಿಂದಲೂ ಬುದ್ಧನ ಬಗ್ಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಂತನೆ ನಡೆದಿದೆ ಎಂದರೆ ಆಶ್ಚರ್ಯ ಆಗುತ್ತದೆ. ಧ್ಯಾನದ ರೀತಿ, ಕಣ್ಣು ಮುಚ್ಚಿರುವ ರೀತಿಯಲ್ಲಿ, ಧರ್ಮದ ರೀತಿಯಲ್ಲಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬುದ್ಧ ಕಂಡಿದ್ದಾನೆ ಎಂದು ಹೇಳಿದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಸಮಾನತೆ, ಸ್ವಾತಂತ್ರ್ಯ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ದಮ್ಮವನ್ನು ಕಟ್ಟಿದ್ದು ಬುದ್ಧ. ಇದೇ ಕಾರಣಕ್ಕೆ ಇಡೀ ವಿಶ್ವ, ಭಾರತಕ್ಕೆ ಗೌರವ ಕೊಡುತ್ತಿದೆ. ಯುದ್ಧ, ಹಿಂಸೆ ಯಾವುದೇ ಕಾರಣಕ್ಕೂ ಯಾರನ್ನೂ ಗೆಲ್ಲಿಸಲು ಸಾಧ್ಯವೇ ಇಲ್ಲ, ಪ್ರೀತಿಯೊಂದೇ ಮಾನವ ಸಂಕುಲ ಬದುಕಿಸಲು ಸಾಧ್ಯ ಎಂದು ಸಾರ್ವಕಾಲಿಕ ಸಂದೇಶ ನೀಡಿದವರು ಭಗವಾನ್ ಬುದ್ಧರು. ಪ್ರಪಂಚದಲ್ಲಿ ಅತ್ಯಂತ ಪಾಂಡಿತ್ಯ ಹೊಂದಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಬುದ್ಧನೇ ನನ್ನ ಗುರು, ನನ್ನ ಬದುಕಿನ ಹಾಗೂ ಎಲ್ಲ ಮೂಲವೂ ಬುದ್ಧನೆ ಎಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ ಮಾತನಾಡಿ, ಎಲ್ಲರಿಗೂ ಭಗವಾನ್ ಬುದ್ಧರ ಜಯಂತಿ ಶುಭಾಶಯ ಕೋರಿದರು. ಗಂಗಾಧರ ಮತ್ತು ತಂಡದವರು ಹಾಗೂ ಕೋಟೆನಾಡು ಬುದ್ಧ ವಿಹಾರದ ಉಪಾಸಕರು ತ್ರಿಸರಣ ಮತ್ತು ಪಂಚಶೀಲ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಪೌರಾಯುಕ್ತೆ ಎಂ.ರೇಣುಕ, ನವಯಾನ ಬುದ್ಧ ದಮ್ಮ ಸಂಘದ ಡಿ.ದುರ್ಗೇಶ್, ಟಿ.ರಾಮು, ಸಿ.ಎ.ಚಿಕ್ಕಣ್ಣ, ಕುಮಾರ್ ಜೆಜೆ ಹಟ್ಟಿ, ಉಪಾಸಕರಾದ ಎಚ್.ಸಿ. ನಿರಂಜನಮೂರ್ತಿ, ಬೀಸನಹಳ್ಳಿ ಜಯಪ್ಪ, ಚಂದ್ರಪ್ಪ ಬೆನಕನಹಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ.ಗುರುನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಟಿ. ತಿಪ್ಪೇರುದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.