ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ನೇರವಾಗಿ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿರುವ ಸೌಜನ್ಯ ಮನೆಗೆ ತೆರಳಿದರು. ಸೌಜನ್ಯ ತಾಯಿ ಕುಸುಮಾವತಿಯವರೊಂದಿಗೆ ಮಾತನಾಡಿದ್ದಾರೆ. ಸೌಜನ್ಯ ಕೇಸ್ ಮರು ತನಿಖೆಯಾಗಬೇಕು, ಸೌಜನ್ಯಳ ಅತ್ಯಾಚಾರಿಗಳಿಗೆ ಶಿಕ್ಷೆಯಾಗಲೇಬೇಕೆಂದು ತಿಳಿಸಿದರು.ತಮ್ಮ ಮಗಳ ಸಾವಿಗೆ ನ್ಯಾಯ ಕೇಳಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಕುಸುಮಾವತಿ ಹೇಳಿದರು.
“ನ್ಯಾಯ ಕೋರಿದ್ದಕ್ಕಾಗಿಯೇ ನಮ್ಮ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ನಿಮ್ಮ ಪಕ್ಷದವರೇ ನಾವು ದೊಡ್ಡ ಮನೆ ಕಟ್ಟಿದ್ದೇವೆ ಮತ್ತು ಸೌಜನ್ಯ ಅವರ ಹೆಸರನ್ನು ಬಳಸಿಕೊಂಡು ಹಣ ಸಂಪಾದಿಸುತ್ತಿದ್ದೇವೆ ಎಂದು ಟೀಕಿಸುತ್ತಿದ್ದಾರೆ. ನಮಗೆ ಯಾವುದೇ ನ್ಯಾಯ ಸಿಗುತ್ತಿಲ್ಲ” ಎಂದು ವಿಜಯೇಂದ್ರ ವಿರುದ್ಧವೇ ಕುಸುಮಾವತಿ ಕಿಡಿ ಕಾರಿದರು.
ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ನಾವು ಒತ್ತಾಯಿಸಿದಾಗ ನಮ್ಮ ಕುಟುಂಬಕ್ಕೆ ಪರೋಕ್ಷವಾಗಿ ಬೆದರಿಕೆಗಳು ಬಂದವು. ಈ ಮೂಲಕ ನಮ್ಮ ಬಾಯಿ ಮುಚ್ಚಿಸುವ ಪ್ರಯತ್ನಗಳು ನಡೆದಿವೆ ಎಂದು ಕುಸುಮಾವತಿ ಕಣ್ಣೀರು ಹಾಕಿದರು.ಬಿಜೆಪಿ ಇದನ್ನು ಮೊದಲೇ ಮಾಡಬಹುದಿತ್ತು ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದಾಗ, ವಿಜಯೇಂದ್ರ ಪ್ರತಿಕ್ರಿಯಿಸಿ, “ನಾವು ಮಗುವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ನೀವು ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿರುದ್ಧ ಹೋರಾಡಲು ನಿರ್ಧರಿಸಿದರೆ ನಮ್ಮ ಪಕ್ಷ ಮತ್ತು ನಾನು ಎಲ್ಲಾ ರೀತಿಯ ಬೆಂಬಲ ನೀಡುತ್ತೇವೆ” ಎಂದು ಭರವಸೆ ನೀಡಿದರು.
ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜಾ ಸಹಿತ ಹಲವು ನಾಯಕರು ಜೊತೆಗಿದ್ದರು.