ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿಗಣತಿ ನಡೆಯಲಿದೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯಗಳು ಕಂಡುಬಂದ ಒಂದು ದಿನದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಯಾವುದೇ ಮುಂದೂಡಿಕೆಯನ್ನು ತಳ್ಳಿಹಾಕಿದರು.
ಸೆಪ್ಟೆಂಬರ್ 22ರಿಂದ ನಿಗದಿಯಂತೆ ಜಾತಿಗಣತಿ ಸಮೀಕ್ಷೆ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು. ಸಮೀಕ್ಷೆಗೆ ಸಿದ್ಧರಿರುವಂತೆ ರಾಜ್ಯದ ಜನತೆಗೆ ತಿಳಿಸಲಾಗಿದೆ. ಇದರ ಮಧ್ಯ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್ಲೈನ್ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈ ಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ.
ಸಮೀಕ್ಷೆಗೆ ಈ ದಾಖಲೆಗಳು ನಿಮ್ಮ ಕೈಯಲ್ಲಿರಲಿ: ಆಧಾರ್ ಕಾರ್ಡ್ : 6 ವರ್ಷ ಮೇಲ್ಪಟ್ಟವರೂ ಸೇರಿ ಪ್ರತಿ ಕುಟುಂಬದ ಸದಸ್ಯರಿಗೆ ಆಧಾರ್ ಕಡ್ಡಾಯವಾಗಿದೆ.l ಪಡಿತರ ಚೀಟಿ : ಆಧಾರ್ ಸಂಖ್ಯೆಯನ್ನು ದೃಢೀಕರಿಸಲು ಪಡಿತರ ಚೀಟಿಯನ್ನು ಆಧಾರವಾಗಿ ಬಳಸಲಾಗುತ್ತದೆ. ಮತದಾರರ ಗುರುತಿನ ಚೀಟಿ: ಇದು ಗುರುತಿನ ದೃಢೀಕರಣಕ್ಕೆ ಸಹಕಾರಿಯಾಗುತ್ತದೆ. ವಿಕಲಚೇತನರು: ವಿಕಲಚೇತನರಾಗಿದ್ದರೆ, ಅವರ UID ಕಾರ್ಡ್ ಅಥವಾ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಆಧಾರ್ ಲಿಂಕಿಂಗ್ : ನಿಮ್ಮ ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಸಮೀಕ್ಷೆಯ ಸಮಯದಲ್ಲಿ OTP ಸಂದೇಶವನ್ನು ಮೊಬೈಲ್ ಗೆ ಕಳುಹಿಸಲಾಗುತ್ತದೆ. ಒಟಿಪಿ (OTP ): ಒಬ್ಬ ಸದಸ್ಯ ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಪರವಾಗಿ ಉತ್ತರ ನೀಡುವವರು ಫೋನ್ ಮೂಲಕ OTP ಸಂಖ್ಯೆಯನ್ನು ಪಡೆದು ಮಾಹಿತಿ ನೀಡಬೇಕಾಗುತ್ತದೆ. ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಅಥವಾ ದೂರು ನೀಡಬಹುದು ಅಥವಾ ಯಾವುದೇ ಮಾಹಿತಿಯನ್ನು ಪಡೆಯಬಹುದು. ಆನ್ ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.