ನವದೆಹಲಿ : ಚೀನಾದಿಂದ ಬರುವ ಬೆದರಿಕೆಯನ್ನು ಬೇಕೆಂದೇ ಅತಿರೇಕವಾಗಿ ಬಿಂಬಿಸಲಾಗುತ್ತಿದೆ. ಚೀನಾ ನಮ್ಮ ಶತ್ರು ದೇಶವಲ್ಲ ಎಂದು ಕಾಂಗ್ರೆಸ್ ಪಕ್ಷದ ವಿದೇಶಿ ಘಟಕದ ಮುಖ್ಯಸ್ಥರಾಗಿರುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತವು ಚೀನಾವನ್ನು ಶತ್ರು ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು. ಭಾರತ-ಚೀನಾ ವಿವಾದವು ಯಾವಾಗಲೂ ಹೆಚ್ಚಾಗಿ ಅತಿರೇಕಕ್ಕೆ ಹೋಗುತ್ತದೆ. ಆದರೆ, ಅದರ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಚೀನಾದಿಂದ ಬರುವ ಬೆದರಿಕೆ ನನಗೆ ಅರ್ಥವಾಗುತ್ತಿಲ್ಲ. ಅಮೆರಿಕವು ಶತ್ರುವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಈ ವಿಷಯ ಚರ್ಚೆ ಆಗುತ್ತಿದೆ. ಎಲ್ಲಾ ರಾಷ್ಟ್ರಗಳು ಎದುರಿಸುವ ಬದಲು ಸಹಕರಿಸುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ನಾವು ಮೊದಲಿನಿಂದಲೂ ಮುಖಾಮುಖಿಯಾಗಿದ್ದೇವೆ. ಈ ಮನೋಭಾವವು ಶತ್ರುಗಳನ್ನು ಸೃಷ್ಟಿಸುತ್ತದೆ ಮತ್ತು ದೇಶದೊಳಗೆ ಬೆಂಬಲವನ್ನು ಗಳಿಸುತ್ತದೆ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು. ಮೊದಲ ದಿನದಿಂದಲೂ ಚೀನಾವನ್ನು ಶತ್ರು ಎಂದು ಭಾವಿಸುವುದು ನ್ಯಾಯಯುತವಲ್ಲ, ಚೀನಾಕ್ಕೆ ಮಾತ್ರವಲ್ಲ, ಯಾರಿಗೂ ನ್ಯಾಯಯುತವಲ್ಲ. ನಾವು ಈ ಮನಸ್ಥಿತಿಯನ್ನು ಬದಲಾಯಿಸಬೇಕು ಮತ್ತು ಯಾವಾಗಲೂ ಚೀನಾ ಶತ್ರು ದೇಶ ಎಂದು ಪರಿಗಣಿಸುವುದನ್ನು ನಿಲ್ಲಿಸಬೇಕು. ಇದು ಚೀನಾಕ್ಕೆ ಮಾತ್ರವಲ್ಲ, ಎಲ್ಲರಿಗೂ ಅನ್ಯಾಯವಾಗಿದೆ ಎಂದು ತಿಳಿಸಿದರು.
ಇನ್ನು ಸ್ಯಾಮ್ ಪಿತ್ರೋಡಾ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ನಮ್ಮ ಭೂಮಿಯಲ್ಲಿ 40,000 ಚದರ ಕಿ.ಮೀ. ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟವರಿಗೆ ಇನ್ನೂ ಚೀನಾದಿಂದ ಯಾವುದೇ ಬೆದರಿಕೆ ಕಾಣುತ್ತಿಲ್ಲ. ರಾಹುಲ್ ಗಾಂಧಿ ಪೀಪಲ್ಸ್ ಲಿಬರೇಶನ್ ಪಾರ್ಟಿ ಆಫ್ ಚೀನಾದೊಂದಿಗೆ ರಹಸ್ಯ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ರಾಜೀವ್ ಗಾಂಧಿ ಚೀನಾದಿಂದ ಹಣವನ್ನು ಪಡೆದಿದ್ದರು. ಜವಾಹರಲಾಲ್ ನೆಹರು ಅಕ್ಸಾಯ್ ಚಿನ್ ಮತ್ತು UNSCಯಲ್ಲಿ ಭಾರತದ ಸ್ಥಾನವನ್ನು ಚೀನಾಕ್ಕೆ ನೀಡಿದರು. ಕಾಂಗ್ರೆಸ್ ಮತ್ತು ಚೀನಾ ನಡುವಿನ ಸ್ನೇಹವು ತುಂಬಾ ಹಳೆಯದು ಎಂದು ಹೇಳಿದೆ.