ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ವಿವಾದಿತ ಪೋಸ್ಟ್ ಹಾಕಿದ್ದವನ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಮ್ಮ ನಾಯಕ ರಾಹುಲ್ ಗಾಂಧಿಗೆ ವ್ಯಂಗ್ಯವಾಗಿ ಅಶ್ಲೀಲವಾಗಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿದೆ. ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಲಿಖಿತ ರೂಪದಲ್ಲಿ ಎಂ.ಲಕ್ಷ್ಮಣ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ. ಲಕ್ಷ್ಮಣ ಕಲ್ಲು ತೂರಾಟದ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಇದ್ದಾರೆ. ಪ್ರತಾಪ್ ಸಿಂಹರನ್ನು ಬಂಧಿಸಿ. ಗಲಾಟೆ ಹಿಂದೆ ಬಿಜೆಪಿ, ಆರ್ಎಸ್ಎಸ್ ಕೈವಾಡವಿದೆ. ವೇಷ ಬದಲಾಯಿಸಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ.
ಇದಕ್ಕಾಗಿ ಆರ್ಎಸ್ಎಸ್ನ 300 ಜನ ಮೈಸೂರಿಗೆ ಬಂದಿದ್ದಾರೆ. ಕಲ್ಲು ತೂರಾಟ ಮಾಡಿದವರಿಗೆ ಕಂಡಲ್ಲೇ ಗುಂಡು ಹಾರಿಸಬೇಕು. ಪ್ರತಾಪ್ ಸಿಂಹ ಓಡಿ ಹೋಗುವ ಮುನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕ ಓರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ದೂರು ನೀಡಿದ್ದಾರೆ.