ದೆಹಲಿ : ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಂತಹ ಪ್ರತಿಷ್ಠಿತ ಹುದ್ದೆಗಳಲ್ಲಿ ಸರ್ಕಾರಿ ಕೆಲಸ ಪಡೆಯುವುದು ಪರೀಕ್ಷೆ ಬರೆಯುವ ಅನೇಕ ಅಭ್ಯರ್ಥಿಗಳ ಕನಸಾಗಿರುತ್ತದೆ. ಹೀಗೆ ತನ್ನ ಐಎಎಸ್ ಅಧಿಕಾರಿಯಾಗುವ ಕನಸನ್ನ ನನಸಾಗಿಸಿಕೊಂಡ ಸೃಷ್ಟಿ ದಾಬಸ್ ಅವರ ಯಶೋಗಾಥೆ ಇದು.
ಐಎಎಸ್ ಅಧಿಕಾರಿ ಸೃಷ್ಟಿ ದಾಬಸ್ ಅವರು ಅಕ್ಟೋಬರ್ 13, 1998 ರಂದು ದೆಹಲಿಯ ರಾಣಿ ಖೇರಾ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಹೆತ್ತವರು ವಿಚ್ಛೇದನ ಪಡೆದ ನಂತರ ಸೃಷ್ಟಿ ಅವರ ತಾಯಿ ಅವರನ್ನು ಒಬ್ಬರೇ ಬೆಳೆಸುತ್ತಾರೆ.
ಸೃಷ್ಟಿ ಅವರು ದೆಹಲಿಯ ಗಂಗಾ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ತಮ್ಮ 12ನೇ ತರಗತಿಯನ್ನು ಪೂರ್ಣಗೊಳಿಸಿದರು. ಅವರು 2016-17ರಲ್ಲಿ ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 96.33% ಅಂಕ ಗಳಿಸುತ್ತಾರೆ. ನಂತರ ಅವರು ಇಂದ್ರಪ್ರಸ್ಥ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ಆ ನಂತರ, IGNOU ದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದರು.
ಸೃಷ್ಟಿ ಕಾಲೇಜಿನಲ್ಲಿರುವಾಗಲೇ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಅದಕ್ಕಾಗಿ ತಯಾರಿಯನ್ನೂ ಆರಂಭಿಸಿದ್ದರು. ವಿದ್ಯಾಭ್ಯಾಸದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಕೆಲಸ ಗಳಿಸುತ್ತಾರೆ. ಆದಾಗ್ಯೂ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಗುರಿ ಹೊಂದಿದ್ದರು. ಅವರು ಮುಂಬೈನಲ್ಲಿ ಆರ್ಬಿಐನಲ್ಲಿ ಗ್ರೇಡ್ II ಹೆಚ್ಆರ್ ಉದ್ಯೋಗಿಯಾಗಿದ್ದರು.
2023ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಸೃಷ್ಟಿ ಅವರು 6ನೇ ಅಖಿಲ ಭಾರತ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.