ಚಿತ್ರದುರ್ಗ: ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವಯಕ್ತಿಕವಾಗಿಯೂ ಸಹಾ ಸಹಾಯ ಮತ್ತು ಸಹಕಾರವನ್ನು ಮಾಡುವುದಾಗಿ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಭರವಸೆಯನ್ನು ನೀಡಿದರು.
ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘ(ರಿ)ದವತಿಯಿಂದ ನಗರದ ಜಿ.ಜಿ. ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗಾಣಿಗ ಸಮಾಜ ಪುರಾತನವಾದ ಸಮಾಜವಾಗಿದೆ. ನನಗೆ ರಾಜಕಾರಣದಲ್ಲಿ ಚಳ್ಳಕರೆ ಹಾಗೂ ಹಿರಿಯೂರಿನಲ್ಲಿ ಸಹಾಯವನ್ನು ಮಾಡಿದೆ ನನ್ನ ಕೈಹಿಡಿದಿದೆ. ನನ್ನ ಗೆಲುವುವಿಗೆ ಸಹಕಾರಿಯಾಗಿದೆ. ನಿಮ್ಮ ಸಮಾಜದ ಋಣ ನನ್ನ ಮೇಲಿದೆ ನಿಮ್ಮ ಸಮುದಾಯದ ಪ್ರಗತಿಗೆ ಸರ್ಕಾರ ಹಾಗೂ ನನ್ನ ವ್ಯಯುತ್ತಿಕವಾಗಿ ಸಹಾಯವನ್ನು ಮಾಡುವುದಾಗಿ ತಿಳಿಸಿದರು.
ಗಾಣಿಗ ಸಮಾಜಕ್ಕೆ ನಿವೇಶನವನ್ನು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಚಿತ್ರದುರ್ಗ ನಗರಸಭೆ ಹಾಗೂ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜೊತೆಯಲ್ಲಿ ಮಾತನಾಡಿ, ಕಡಿಮೆ ದರದನ್ನು ನಿವೇಶನವನ್ನು ಕೂಡಿಸುವ ಕೆಲಸವನ್ನು ಮಾಡುತ್ತೇನೆ, ಸರ್ಕಾರವೂ ಸಹಾ ಇಂತಹ ಸಮಾಜಗಳಿಗೆ ಶೇ.10ರ ರಿಯಾಯಿತಿ ದರದಲ್ಲಿ ನಿವೇಶನವನ್ನು ನೀಡಬೇಕೆಂದು ಸೂಚನೆಯನ್ನು ನೀಡಿದೆ ಇದರಂತೆ ನಿಮ್ಮ ಸಮಾಜಕ್ಕೆ ನಿವೇಶನವನ್ನು ಕೊಡಿಸುವ ಹೊಣೆ ನನ್ನದು ಎಂದ ಸಚಿವರು ಸಮಾಜದಲ್ಲಿ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹ ಮಾಡುವುದು ಸಮಾಜದ ಕೆಲಸವಾಗಿದೆ ನಮ್ಮ ಸಮಾಜದ ಮಕ್ಕಳನ್ನು ನಾವೇ ಗುರುತಿಸಿ ಪ್ರೋತ್ಸಾಹ ಮಾಡದಿದ್ದರೆ ಬೇರೆಯವರು ಹೇಗೆ ಗುರುತಿಸುತ್ತಾರೆ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಮಾಡುವುದು ಎಲ್ಲಾ ಸಮಾಜಗಳಲ್ಲಿಯೂ ಸಹಾ ನಡೆಯಬೇಕಿದೆ. ಗಾಣಿಗ ಸಮಾಜ ಬಸವಣ್ಣ ರವರ ಕಾಲದಿಂದಲೂ ಇದೆ ಚಿತ್ರದುರ್ಗದಲ್ಲಿ ನಿಮ್ಮ ಸಮಾಜದವರೇ ಶಾಸಕರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ, ಗಾಣಿಗ ಸಮಾಜ ಭೂಮಿಯ ಮೇಲೆ ನಾಗರಿಕತೆ ಹುಟ್ಟಿದಾಗಿನಿಂದಲೂ ಇದೆ. ಕರ್ನಾಟಕ ರಾಜ್ಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಇದೆ. ಇವರು ಬಹು ಸಂಖ್ಯಾತರಾಗಿದ್ದಾರೆ. ಬೇರೆಯವರಿಗೆ ಉದ್ಯೋಗವನ್ನು ನೀಡುವುದರ ಮೂಲಕ ಶ್ರೀಮಂತರಾಗಿದ್ದಾರೆ ಆದರೆ ಈಗ ಎಣ್ಣೆಯನ್ನು ತೆಗೆಯಲು ಯಂತ್ರಗಳು ಬಂದಾಗಿನಿಂದ ನಿಮ್ಮ ಕುಲ ಕಸುಬಿಗೆ ಹೊಡೆತ ಬಿದ್ದಂತೆ ಆಗಿದೆ. ಸಮಾಜದಲ್ಲಿ ಗಾಣಿಗರು ಗೌರಯುತವಾದ ಬದುಕನ್ನು ನಡೆಸುತ್ತಿದ್ದಾರೆ, ತಮ್ಮ ಜೊತೆಗೆ ಬೇರೆ ಸಮಾಜದವರನ್ನು ಸಹಾ ಕರೆದುಕೊಂಡು ಹೋಗುವ ಗುಣವನ್ನು ಹೊಂದಿದ್ದಾರೆ. ಇದ್ದಲ್ಲದೆ ಬೇರೆ ಸಮಾಜದವರ ಕಷ್ಟಕ್ಕೆ ಮರುಗುವ ಗುಣವನ್ನು ಹೊಂದಿದ್ದಾರೆ ಎಂದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹ ಮಾಡುವುದು ಉತ್ತಮವಾದ ಕೆಲಸವಾಗಿದೆ. ಇದನ್ನು ಪ್ರತಿಯೊಂದು ಸಮಾಜವೂ ಸಹಾ ಮಾಡಬೇಕಿದೆ. ಇದರಿಂದ ಮಕ್ಕಳಿಗೆ ಮತ್ತಷ್ಟು ಸಾಧನೆಯನ್ನು ಮಾಡಬೇಕೆನ್ನುವ ಉತ್ಸಾಹ ಬರುತ್ತದೆ ಅಲ್ಲದೆ ಇದನ್ನು ನೋಡಿದ ಬೇರೆ ಮಕ್ಕಳಿಗೂ ಸಹಾ ನಾವು ಇವರಂತೆ ಆಗಬೇಕೆಂಬ ಛಲ ಮೂಡುತ್ತದೆ. ಗಾಣಿಗ ಸಮುದಾಯ ನಮ್ಮ ದೇಶಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದೆ ನಮ್ಮನ್ನಾಳುವ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರರ ಮೋದಿಯವರು ಹಾಗೂ ಸಿದ್ದೇಶ್ವರ ಸ್ವಾಮೀಜಿಯವರ ಸಹಾ ಗಾಣಿಗರೇ, ದೇಶದಲ್ಲಿ ಈ ಸಮುದಾಯ ಒಂದೇ ಕುಲಕಸುಬನ್ನು ಹೊಂದಿದ ಸಮುದಾಯವಾಗಿದೆ. ನನ್ನ ಚುನಾವಣೆಯಲ್ಲಿ ಗಾಣಿಗ ಸಮುದಾಯ ಉತ್ತಮವಾದ ಸಹಕಾರವನ್ನು ನೀಡಿ ನನ್ನ ಗೆಲುವಿಗೆ ನೆರವಾಗಿದೆ. ಅವರ ಋಣ ನನ್ನ ಮೇಲಿದೆ ಇದನ್ನು ತೀರಿಸಲು ಈ ಸಮುದಾಯಕ್ಕೆ ಸಹಾಯವನ್ನು ಮಾಡುವ ಭರವಸೆಯನ್ನು ಸಂಸದರು ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಗಾಣಿಗ ಸಮಾಜ ಕಾಯಕ ಸಮಾಜವಾಗಿದೆ. ಗಾಣಿಗರು ಇಲ್ಲದಿದ್ದರೆ ನಮ್ಮ ಮನೆ, ದೇವಾಲಯ, ಆಡುಗೆ ಮನೆಯಲ್ಲಿ ಎಣ್ಣೆ ಇಲ್ಲವಾಗಿರುತ್ತಿತ್ತು. ಈ ಸಮುದಾಯ ಕರ್ನಾಟಕ ಮಾತ್ರವಲ್ಲದೆ ಭಾರತ ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈಗಲೂ ಸಹಾ ಹಲವಾರು ಜನತೆ ಗಾಣವನ್ನು ಇಟ್ಟುಕೊಂಡು ತಮ್ಮ ಮೂಲ ಕಸುಬನ್ನು ಮುಂದುವರೆಸಿದ್ದಾರೆ. ಆದರೆ ಯಂತ್ರಗಳು ಬಂದ ಮೇಲೆ ನಿಮ್ಮ ವೃತ್ತಿಯ ಮೇಲೆ ಹೊಡೆತ ಬಿದ್ದಂತೆ ಆಗಿದೆ. ನಿಮ್ಮ ಸಮಾಜ ಸಂಘಟನೆಯಾಗಬೇಕಿದೆ. ನಿಮ್ಮಲ್ಲಿ ಇರುವ ಗೊಂದಲಗಳಿಂದ ಹೊರಗೆ ಬರಬೇಕಿದೆ. ಒಂದು ಕಾಲದಲ್ಲಿ ಚಳ್ಳಕೆರೆಯನ್ನು ಚೋಟ ಮುಂಬೈ ಎಂದು ಕರೆಯಾಲಾಗುತ್ತಿತ್ತು ಅಲ್ಲಿ ಅಷ್ಟೊಂದು ಎಣ್ಣೆ ಮಿಲ್ಗಳು ಇದ್ದವು. ನನ್ನ ರಾಜಕೀಯ ಹಾಗೂ ವ್ಯವಹಾರಿಕ ಬೆಳವಣಿಗೆಗೆ ಗಾಣಿಗ ಸಮಾಜ ಕಾರಣವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಹಾಗೂ ವಿಜಯಪುರದ ವನಶ್ರೀ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಜಯಬಸವಕುಮಾರ ಸ್ವಾಮೀಜಿ ಮಾತನಾಡಿ, ಗಾಣಿಗ ಸಮಾಜ ಸಂಘಟಿತರಾಗಬೇಕಿದೆ. ನಮ್ಮ ಸಮಾಜದಲ್ಲಿಯೂ ಸಹಾ ಪ್ರತಿಭಾವಂತರಿದ್ದಾರೆ. 2ಎ ಮೀಸಲಾತಿಯನ್ನು ಪಡೆಯುವುದರ ಮೂಲಕ ಶಿಕ್ಷಣವನ್ನು ಪಡೆಯಬೇಕಿದೆ. ಮೀಸಲಾತಿಯ ಪ್ರಭಾವ ಈ ಹಿಂದೆ ಅಷ್ಠಾಗಿ ಇರಲಿಲ್ಲ ಈಗ 15 ವರ್ಷದಿಂದ ಇದರ ಪ್ರಭಾವ ಹೆಚ್ಚಾಗಿದೆ. ಈಗ ಮೀಸಲಾತಿ ಅನಿವಾರ್ಯ ಎನ್ನುವ ಪ್ರಸಂಗ ಬಂದಿದೆ. ಜಾತಿ ಗಣತಿಯಲ್ಲಿ ಗಾಣಿಗ ಎಂದು ಬರೆಸುವುದರ ಮೂಲಕ ನಮ್ಮ ಸಮುದಾಯದ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ನಮ್ಮ ಸಮುದಾಯದವರನ್ನು ಜಾಗೃತಿಯನ್ನು ಮೂಡಿಸುವ ಸಲುವಾಗಿ ಡಿಸೆಂಬರ ಆಥವಾ ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲಾಗುವುದು, ಇದರಲ್ಲಿ ನಮ್ಮ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯ ಮಾಡಲಾಗುವುದ ಇದ್ದಲ್ಲದೆ ನಮ್ಮ ಅಭೀವೃದ್ದಿಗಾಗಿ ಗಾಣಿಗ ಅಭೀವೃದ್ದಿ ನಿಗಮವನ್ನು ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ಹಾಕಲಾಗುವುದು ಎಂದರು.
ತಾಲೂಕು ಗಣಿಗಾರರ ಸಂಘದ ಅಧ್ಯಕ್ಷರಾದ ಎ.ಆರ್.ತಿಪ್ಪೇಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷರಾದ ಡಿ.ಎಸ್. ಸುರೇಶ್ಬಾಬು(ಸೈಟ್ ಬಾಬಣ್ಣ). ಚಿತ್ರದುರ್ಗ ತಾಲ್ಲೂಕು ಗಾಣಿಗರ ಸಂಘ ಮಹಿಳಾ ವಿಭಾಗದ ಗೌರವಾಧ್ಯಕ್ಷರಾದ ಶ್ರೀಮತಿ ಕೆ.ಸಿ.ವೀಣಾ ಚಿತ್ರದುರ್ಗ ತಾಲ್ಲೂಕು ಗಾಣಿಗರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಸುರೇಶ್ ಬಾಬು ಹಿರಿಯ ಉಪಾಧ್ಯಕ್ಷರಾದ ಡಿ.ಎಸ್.ರುದ್ರಮುನಿ, ಭರಮಸಾಗರ ಹೊಸದುರ್ಗದ ಮಲ್ಲಿಕಾರ್ಜನಪ್ಪ, ಮೊಳಕಾಲ್ಮೂರಿನ ವಿನಯಕುಮಾರ್, ಹಿರಿಯೂರಿಬ ಸಿದ್ದಾಮಣ್ಣ, ಚಳ್ಳಕೆರೆಯ ಸುಮಿತ್ರಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ದಾವಣಗೆರೆಯ ರತ್ನಮ್ಮ, ತಿಪ್ಪೇಸ್ವಾಮಿ, ಶಿವಾನಂದ,ಮ ಮುರುಘೇಶ, ಮಂಜುನಾಥ್, ವರದಶಂಕರ್ ಆಶೋಕ್ ವಿರೂಪಾಕ್ಷಿ, ನಂದಿಶ್ ಭಾಗವಹಿಸಿದ್ದರು.
ಉಪನ್ಯಾಸಕರಾದ ಡಾ.ಮೇಘನಾ ಜಿ ರವರು ಗಾಣಿಗ ಸಮುದಾಯದ ಅರ್ಥಿಕ, ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಉಪನ್ಯಾಸ ನೀಡಿದರು. ಉಮೇಶ್ ಪತ್ತದ್ ಪ್ರಾರ್ಥಿಸಿದರೆ, ವಿರೇಂದ್ರ ಕುಮಾರ್ ಸ್ವಾಗತಿಸಿದರು, ಜ್ಞಾನ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.